"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 8 March 2015

☀"ವಿಕ್ರಮ ಶಿಲಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.  (Elaborate about "VikramaShila University")

☀"ವಿಕ್ರಮ ಶಿಲಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.
(Elaborate about "VikramaShila University")

━━━━━━━━━━━━━━━━━━━━━━━━━━━━━━━━━━━━━━━━━━━━━


●.ವಿಕ್ರಮ ಶಿಲಾ ವಿಶ್ವವಿದ್ಯಾಲಯ
(VikramaShila University)


—ವಿಕ್ರಮ ಶಿಲಾ ವಿದ್ಯಾಲಯವು ಈಗಿನ ಭಾಗಲಪುರ ಜಿಲ್ಲೆಯ ಸುಲ್ತಾನಗಂಜ ಬಳಿ ಇದ್ದಿತು. ಭಾರತದ ಇತಿಹಾಸದಲ್ಲಿ ಬಹಳ ಇತ್ತೀಚಿನ ವಿಶ್ವವಿದ್ಯಾಲಯವೆಂದರೆ ವಿಕ್ರಮ ಶಿಲೆಯೇ. ಇದು ಇತ್ತೀಚಿನದಾದ್ದರಿಂದ, ಆಧುನಿಕ ರೀತಿಯ ವ್ಯವಹಾರವು ಇಲ್ಲಿ ಕಾಣಬರುತ್ತದೆ.
ವಿದ್ಯಾಮಂದಿರದ ನಾಲ್ಕೂ ಕಡೆ, ವಿಸ್ತೃತವಾದ ತೋರಣವಿದ್ದಿತು. ಮತ್ತು ಪ್ರತಿಯೊಂದು ದ್ವಾರದಲ್ಲಿಯೂ ಒಂದೊಂದು ಪ್ರವೇಶಿಕಾ ಪರೀಕ್ಷಾ ಗೃಹವು ನಿರ್ಮಿಸಲ್ಪಟ್ಟಿದ್ದಿತು. ಪ್ರತಿಯೊಂದು ಪರೀಕ್ಷಾ ಗೃಹದಲ್ಲಿಯೂ ಒಬ್ಬ ‘ದಿಗ್ಗಜ ವಿದ್ವಾನರಿರುತ್ತಿದ್ದರು.

●.ವಿದ್ಯಾಮಂದಿರದಲ್ಲಿ ಪ್ರವೇಶಿಸಬೇಕಾದ ವಿದ್ಯಾರ್ಥಿಯು ಪ್ರಥಮತಃ ಈ ದ್ವಾರಸ್ಥ ಪಂಡಿತರ ಪರೀಕ್ಷೆ ಅನುಮತಿ ಇಲ್ಲದೆ ಪ್ರವೇಶಿಸುವಂತಿರಲಿಲ್ಲ.ತಾಂತ್ರಿಕ ಜ್ಞಾನ ಪ್ರಸಾರಣೆಗೆ ವಿಕ್ರಮಶಿಲಾ ವಿದ್ಯಾಲಯವು ಕೇಂದ್ರವಾಗಿದ್ದಿತು. ಮಹಾಜ್ಞಾನಿಯೂ ಸಂತನೂ ಆಗಿದ್ದ ಶ್ರೀ ಜ್ಞಾನದೀಪಂಕರನು ಇದರ ಕುಲಪತಿಯಾಗಿದ್ದನು. ರತ್ನವಜ್ರ, ಲೀಲಾವಜ್ರ, ಕೃಷ್ಣ ಸಮರವಜ್ರ, ತಥಾಗತ ರಕ್ಷಿತ, ಭೋ ಬದ್ರ, ನರೇಂದ್ರ ಮತ್ತು ಕಮಲರಕ್ಷಿತರೇ ಮೊದಲಾದ ಅಷ್ಟ ಮಹಾಪಂಡಿತರ ಸತತ ಪರಿಶ್ರಮದಿಂದ ಜ್ಞಾನವು ಸತತ ಧಾರೆಯಾಗಿ ಇಲ್ಲಿ ಹರಿಯುತ್ತಿತ್ತು. ಈ ಎಂಟು ಜನವಲ್ಲದೆ, ಇನ್ನೂ 108 ಮಂದಿ ಅಧ್ಯಾಪಕರು ಇಲ್ಲಿದ್ದರು.

●.ವಿಕ್ರಮಶಿಲಾ ವಿಶ್ವವಿದ್ಯಾಲಯದಲ್ಲಿ ಧರ್ಮ, ಸಾಹಿತ್ಯ, ದರ್ಶನ, ನ್ಯಾಯ ಮುಂತಾದವುಗಳ ಶಿಕ್ಷಣವಿದ್ದರೂ, ಮಂತ್ರಶಾಸ್ತ್ರಕ್ಕೆ ಹೆಚ್ಚು ಪ್ರಾಧಾನ್ಯವಿದ್ದಿತು. ನಾಲಂದಾದಲ್ಲಿಯೂ ಮತ್ತು ವಿಕ್ರಮ ಶಿಲೆಯಲ್ಲಿಯೂ ತಾಂತ್ರಿಕ ಮಾಂತ್ರಿಕ ವಿದ್ಯೆಗೆ ಬಹಳ ಪ್ರಾಶಸ್ತ್ಯವಿದ್ದಿತು.

●.ಭಾರತದ ನಾನಾ ಕಡೆಗಳಲ್ಲಿ ಮಾತ್ರವಲ್ಲ, ವಿಶ್ವದಲ್ಲೂ ಸಹ ವಿಕ್ರಮಶಿಲಾ ವಿಶ್ವವಿದ್ಯಾಲಯದ ಪ್ರಭಾವವು ಬಿದ್ದಿದ್ದಿತು. ಪರರಾಷ್ಟ್ರಗಳಿಂದ ಬಂದವರಿಗೂ ಮತ್ತು ಇಲ್ಲಿನ ವಿದ‍್ಯಾರ್ಥಿಗಳ ಅಶನವಸನಗಳನ್ನು ವಿದ್ಯಾಲಯವೇ ವಹಿಸಿದ್ದಿತು. ಪರರಾಷ್ಟ್ರಗಳಲ್ಲಿದ್ದ ವಿದ್ಯಾಕೇಂದ್ರಗಳಿಗೆ, ವಿಕ್ರಮ ಶಿಲೆಯ ಕುಲಪತಿಯಾದ ಶ್ರೀ ಜ್ಞಾನತೀರ್ಥಂಕರನು ಭೇಟಿಕೊಟ್ಟು ಅವುಗಳನ್ನು ವ್ಯವಸ್ಥಿತಗೊಳಿಸಿದನು. ಶ್ರೀ ವಿಜಯಕ್ಕೆ (ಸುಮಾತ್ರ) ಬೌದ್ಧಮತ ಪ್ರಸಾರಣಾರ್ಥ ಹೋಗಿಬಂದನು. ಟಿಬೆಟ್ಟಿನ ಅರಸನ ಆಹ್ವಾನದ ಮೇಲೆ ಅಲ್ಲಿಗೂ ಹೋಗಿ, ಅಲ್ಲಿನ ಜನಗಳಲ್ಲಿ ಭಾರತೀಯ ಸಂಸ್ಕೃತಿ ಹಿರಿಮೆ, ಘನತೆಗಳನ್ನು ಮೊಳಗಿಸಿದನು. ಆದರೆ ಇಲ್ಲಿಯೂ ಸಹ ಪಾಪಿ ಯವನರಿಂದ ಈ ತೃತೀಯ ಮಹಾ ವಿಶ್ವವಿದ್ಯಾನಿಲಯವು ಭಾರತದಿಂದ ಕಣ್ಮರೆಯಾಗಬೇಕಾಯಿತು.

●.1193ರಲ್ಲಿ ಪಾಲ ವಂಶದ ಅರಸರ ಅಪಜಯದಿಂದ ವಿಕ್ರಮಶಿಲೆಯೂ ನಾಮಾವಶೇಷ ವಾಗಬೇಕಾಯಿತು. ಮಹಮ್ಮದಬಿನ್ ಅಕ್ತಿಯಾರನ ನೇತೃತ್ವದಲ್ಲಿ ಭಾರತವನ್ನು ಸೂರೆಗೊಂಡ ಮಹಮ್ಮದೀಯರು ವಿಕ್ರಮಶಿಲಾ ಮತ್ತು ನಾಲಂದಾಗಳನ್ನು ಹೇಳಹೆಸರಿಲ್ಲದ ಹಾಗೆ ಮಾಡಿದರು. ರಾಜನಾಗಿದ್ದ ಗೋವಿಂದಪಾಲನೂ ಸಹ ಈ ದುರುಳರಿಂದ ಕೊಲ್ಲಲ್ಪಟ್ಟನು.

●.ಈ ಮೇಲೆ ತಿಳಿಸಿದ ವಿಶ್ವವಿದ್ಯಾನಿಲಯಗಳು ಮುಖ್ಯವೆಂದೆನಿಸಿಕೊಂಡವುಗಳಲ್ಲಿ ಅತಿ ಮುಖ್ಯವಾದವುಗಳು. ಒಂದೊಂದು ಕಾಲದಲ್ಲಿ ಒಂದೊಂದು ವಿಶ್ವವಿದ್ಯಾನಿಲಯವು ವೈಭವ ಶಿಖರವನ್ನೇರಿತ್ತು. ಕ್ರಿ.ಪೂ. 8ನೇ ಶತಮಾನದಿಂದ ಕ್ರಿ. ಶ. 2ನೇ ತಕ್ಷಶಿಲಾ ನಂತರ ನಾಲಂದಾ ಇವು ಜ್ಞಾನಪ್ರಸಾರ ಕೇಂದ್ರಗಳಾಗಿದ್ದವು. ಆಗಿನ ಕಾಲದ ಉಚ್ಚತಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಆಗಿನ ಕಾಲದ ವಿದ್ಯಾಭ್ಯಾಸದ ಪದ್ಧತಿಯೇ ಕಾರಣವಾಗಿತ್ತು. ಇವುಗಳಲ್ಲದೇ ಸಮಗ್ರ ಭಾರತದಲ್ಲಿ , ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರಮುಖ ಕೇಂದ್ರಗಳಿದ್ದವು. ‘ಗುರುಕುಲಗಳು’ (ಪ್ರಾಚೀನ ವಿದ್ಯಾಭ್ಯಾಸದ ಪೀಠಗಳು) ಎಲ್ಲೆಡೆಯಲ್ಲೂ ಇದ್ದುವು.

— ಮೇಲೆ ಹೇಳಿದವು ವಿಶಾಲ ಗುರುಕುಲಗಳಾಗಿದ್ದುವೇ ವಿನಾ ಅವುಗಳಿಂದ ಭಿನ್ನವಾಗಿರಲಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಸಹಸ್ರಾವಧಿ ಇದ್ದರೂ ವೈಯಕ್ತಿಕವಾಗಿ, ವಿದ್ಯಾರ್ಥಿಯ ಮನೋಗತಕ್ಕನುಗುಣವಾಗಿ ಶಿಕ್ಷಣ ಕೊಡುತ್ತಿದ್ದುದೇ ಆಗಿನ ಕಾಲದ ವಿದ್ಯಾಭ್ಯಾಸ ವೈಶಿಷ್ಟ್ಯವಾಗಿತ್ತು.

(Courtesy: Vikrama) 

No comments:

Post a Comment