"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 22 June 2014

★ ಪ್ರಸ್ತುತ ಭಾರತದಲ್ಲಿ ಅಸ್ತಿತ್ವದಲ್ಲಿರುವ ಸಾರ್ವಜನಿಕ ಪಡಿತರ ವ್ಯವಸ್ಥೆಯ ಕುರಿತು ವಿಮರ್ಶಾತ್ಮಕವಾಗಿ ಚರ್ಚಿಸಿ. (250 ಶಬ್ದಗಳಲ್ಲಿ)

★ ಪ್ರಸ್ತುತ ಭಾರತದಲ್ಲಿ ಅಸ್ತಿತ್ವದಲ್ಲಿರುವ ಸಾರ್ವಜನಿಕ ಪಡಿತರ ವ್ಯವಸ್ಥೆಯ ಕುರಿತು ವಿಮರ್ಶಾತ್ಮಕವಾಗಿ ಚರ್ಚಿಸಿ. (250 ಶಬ್ದಗಳಲ್ಲಿ) ಭಾರತದಲ್ಲಿ ಅಸ್ತಿತ್ವದಲ್ಲಿರುವ ಗುರಿಗೊಳಿಸಲಾದ ಸಾರ್ವಜನಿಕ ವಿತರಣೆ ವ್ಯವಸ್ಥೆಯು ಇಡೀ ಜಗತ್ತಿನಲ್ಲಿಯೇ ಒಂದು ವಿಸ್ತೃತವಾದ ಮತ್ತು ಪ್ರಮುಖವಾದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. 1997 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಗತ್ಯ ಸಾಮಗ್ರಿಗಳಾದ ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆ ಮುಂತಾದವುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಬಡಜನರಿಗೆ ಸಹಾಯಧನದ ದರದಲ್ಲಿ ವಿತರಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಬಡಜನರ ಆಹಾರ ಭದ್ರತೆಯನ್ನು ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಇದರ ಜೊತೆಗೆ ಹೆಚ್ಚು ವ್ಯಾಪಕವಾಗಿರದೇ ನಗರವಾಸಿಗಳ ಪರವಾಗಿತ್ತು. ಈ ಕಾರಣಗಳಿಂದ ಭಾರತ ಸರ್ಕಾರ ಜೂನ್ 1997 ರಂದು ಆಹಾರದ ಅಗತ್ಯವಿರುವ ಅರ್ಹರಾದ ಅತಿ ಕಡು ಬಡಜನರಿಗೆ ಅತ್ಯಂತ ಕಡಿಮೆದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಮತ್ತು ರಾಷ್ಟ್ರದ ವಿತ್ತೀಯ ಕೊರತೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ಸಾರ್ವಜನಿಕ ವಿತರಣೆಯನ್ನು ಗುರಿಗೊಳಿಸಲಾದ ಸಾರ್ವಜನಿಕ ಪಡಿತರ ವ್ಯವಸ್ಥೆ - (ಗು.ಸಾ.ಪ.ವ್ಯ.) ಎಂದು ಪರಿಚಯಿಸಿತು. ದೇಶದ ಅತಿ ಕಡುಬಡವರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸುವ ಮೂಲಕ ಅವರ ಬಡತನದ ಸಮಸ್ಯೆಯನ್ನು ನಿರ್ಮೂಲನೆ ಮಾಡುವ, ಹೆಚ್ಚಿನ ಸಹಾಯಧನದ ದರದಲ್ಲಿ ಅತಿ ಕಡುಬಡಕುಟುಂಬಗಳಿಗೆ (ಅಂದರೆ ವಾರ್ಷಿಕ ರೂ. 12000ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು) ಆಹಾರ ಧಾನ್ಯಗಳನ್ನು ಒದಗಿಸುವುದು ಗುರಿಗೊಳಿಸಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆ ಗು.ಸಾ.ವಿ.ವ್ಯ.ಯ ಪ್ರಮುಖ ಗುರಿಗಳಾಗಿದ್ದಿತು. ಈ ಉದ್ದೇಶಕ್ಕಾಗಿ ಪ್ರಾರಂಭದಲ್ಲಿ ಸರ್ಕಾರವು 6 ಕೋಟಿ ಕಡು ಬಡಕುಟುಂಬಗಳನ್ನು ಸೇರಿಸಿಕೊಳ್ಳುವ ಮತ್ತು ವಾರ್ಷಿಕವಾಗಿ 72 ಲಕ್ಷ ಟನ್ ಗಳಷ್ಟು ಆಹಾರ ಧಾನ್ಯಗಳನ್ನು ವಿತರಿಸಲು ಮುಂದಾಯಿತು. ಬಡಕುಟುಂಬ ಗಳಿಗೆ ಈ ಮೊದಲು ಮಾಸಿಕವಾಗಿ ನೀಡುತ್ತಿದ್ದ 10 ಕೆಜಿಗಳ ಆಹಾರ ಧಾನ್ಯದ ಪ್ರಮಾಣವನ್ನು 35 ಕೆಜಿಗಳಿಗೆ ಹೆಚ್ಚಿಸಲಾಯಿತು. * ಅಂತ್ಯೋದಯ ಅನ್ನಯೋಜನೆಯು ಗು.ಸಾ.ವಿ.ವ್ಯಯ ಒಂದು ಪ್ರಮುಖ ಹಂತವಾಗಿದ್ದು ಬಡಕುಟುಂಬಗಳ ಹಸಿವನ್ನು ನೀಗಿಸುವ ಗುರಿಹೊಂದಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆಯ ಪ್ರಕಾರ. ದೇಶದಲ್ಲಿ ಪ್ರತಿದಿನ ದೇಶದ ಒಟ್ಟು ಜನಸಂಖ್ಯೆಯ ಶೇ 5ರಷ್ಟು ಜನರು ಎರಡು ಹೊತ್ತಿನ ಊಟ ಇಲ್ಲದೇ ರಾತ್ರಿ ಕಳೆಯುತ್ತಿದ್ದಾರೆ. ಈ ರೀತಿಯ 1 ಕೋಟಿಗೂ ಹೆಚ್ಚಿನ ಕುಟುಂಬಗಳಿಗಾಗಿ ಭಾರತ ಸರ್ಕಾರ ಡಿಸೆಂಬರ್ 2000ದಂದು ಮೇಲೆ ತಿಳಿಸಿದ ಅಂತ್ಯೋದಯ ಅನ್ನ ಯೋಜನೆಯನ್ನು ಪ್ರಾರಂಭಿಸಿತು. ಒಟ್ಟಾರೆ ಗು.ಸಾ.ವಿ ವ್ಯಯ ಅಡಿಯಲ್ಲಿ ವಾರ್ಷಿಕ ರೂ. 12,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರನ್ನು ಬಡವರು ಎಂದು ಗುರುತಿಸಿ ಅವರಿಗೆ ಸಹಾಯಧನದ ಬೆಲೆಯಲ್ಲಿ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದೆ.