"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 28 May 2016

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ: ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್: (UPSC Exclusive Interview)

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ:
ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್:
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•► ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2015 ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 1,078 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅದರಲ್ಲಿಯೂ ಈ ಬಾರಿ ಕರ್ನಾಟಕದ 30 ಕ್ಕೂ ಹೆಚ್ಚು ಮಂದಿ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ದಾವಣಗೆರೆಯ ದರ್ಶನ್ 48 ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ವಿಶ್ವಮೂರ್ತಿ ಮತ್ತು ಪದ್ಮ ದಂಪತಿ ಪುತ್ರರಾದ ದರ್ಶನ್ ಮೂಲತಃ ದಾವಣಗೆರೆಯವರಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಾಸನದಲ್ಲಿ, ಫ್ರೌಢಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ದಾವಣಗೆರೆಯಲ್ಲಿ ಪೂರೈಸಿ, ಬೆಂಗಳೂರಿಗೆ ಬಂದು ನೆಲೆಸಿದ ಅವರು ಬೆಂಗಳೂರಿನ ಜೆಎಸ್’ಎಸ್ ಐಟಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಅಂಡ್ ಮ್ಯಾನೆಜ್’ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಆಯ್ಕೆಯ ಸಂಭ್ರಮವನ್ನು ಸುವರ್ಣ ನ್ಯೂಸ್-ಕನ್ನಡಪ್ರಭಕ್ಕೆ ನೀಡಿದ ಮೊದಲ ಸಂದರ್ಶನ ಹಂಚಿಕೊಂಡಿದ್ದಾರೆ.


●.ಐಎಎಸ್ ಕನಸು ಶುರುವಾಗಿದ್ದು, ತಯಾರಿ ಪ್ರಾರಂಭಿಸಿದ್ದು ಯಾವಾಗ..?

•► 2011ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಸಾರ್ವಜನಿಕ ಸೇವೆಯನ್ನು ಮಾಡಬೇಕು ಎನ್ನುವ ಕನಸು ಶುರುವಾಯಿತು. ಅಂದಿನಿಂದಲೇ ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ.


●.ಯುಪಿಎಸ್’ಸಿ ಪರೀಕ್ಷೆಯಲ್ಲಿ ಇದು ಎಷ್ಟನೇ ಪ್ರಯತ್ನ..?

•► 2011ರಿಂದ ಇಲ್ಲಿಯವರೆಗೂ 4 ಬಾರಿ ಪ್ರಯತ್ನ ಮಾಡಿದ್ದೇನೆ. ಈ ಬಾರಿಯ ಪ್ರಯತ್ನದಲ್ಲಿ ಯಶಸ್ಸು ದೊರಕಿದೆ. ಮೊದಲ ಮೂರು ಪ್ರಯತ್ನಗಳಲ್ಲಿ ಪ್ರಿಲಿಮ್ಸ್’ನಲ್ಲಿ ಪಾಸಾಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ 48ನೇ ಸ್ಥಾನ ಪಡೆದಿರುವುದು ತುಂಬ ಖುಷಿ ನೀಡಿದೆ. ಯಾವುದೇ ಪ್ರಯತ್ನದಲ್ಲಿ ಸೋಲು ಕಂಡಾಗ ಮತ್ತೆ ಪ್ರಯತ್ನಿಸದಿದ್ದರೆ ಗೆಲುವು ಕಾಣುವುದು ಸಾಧ್ಯವಿಲ್ಲ, ಮತ್ತೆ ಮತ್ತೆ ಪಯತ್ನಿಸಿದರಷ್ಟೇ ಯಶಸ್ಸು ಖಂಡಿತ.


●.ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಹೇಗಿತ್ತು..?

•► 2011ರಲ್ಲಿ ಬಿಇ ಪದವಿ ಪಡೆದ ನಂತರದ ಕೋಚಿಂಗ್ ಪಡೆಯುವ ಸಲುವಾಗಿ ದೆಹಲಿಗೆ ತೆರಳಿ ಅಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದು, ನಂತರ ಬೆಂಗಳೂರಿಗೆ ವಾಪಸಾಗಿ ಜಯನಗರದಲ್ಲಿರುವ ಜೆಎಸ್ಎಸ್ ಕೋಚಿಂಗ್ ಸೆಂಟರ್’ನಲ್ಲಿ ಕೆಲದಿನ ತರಬೇತಿ ಪಡೆದಿದ್ದೆ. ಇದಾದ ಬಳಿಕ ಯಾವುದೇ ಕೋಚಿಂಗ್ ಪಡೆಯಲಿಲ್ಲವಾದರೂ ಜೆಎಸ್ಎಸ್ ಕೋಚಿಂಗ್ ಸೆಂಟರ್’ನ ಲೈಬ್ರರಿಯಲ್ಲಿ ಹೆಚ್ಚಿನ ಕಾಲ ಕುಳಿತು ಓದಿದ್ದು ಬಹಳ ಸಹಾಯಕ ಆಯ್ತು. ನಾನೇನು ದಿನ ನಿತ್ಯ ಇಷ್ಟು ಸಮಯವೇ ಓದಬೇಕು ಎಂಬ ನಿಯಮವನ್ನು ಹಾಕಿಕೊಂಡಿರಲಿಲ್ಲ, ಅಲ್ಲದೇ ಕೆಲವು ಬಾರಿ ವಾರಗಟ್ಟಲೆ ಓದದೆಯೂ ಇರುತ್ತಿದ್ದೆ. ಒಟ್ಟಿನಲ್ಲಿ ದಿನಕ್ಕೆ 6 ಗಂಟೆಕಾಲ ಅಭ್ಯಾಸ ಮಾಡಿದರೂ ಸಾಕು. ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಓದಿದೆ, ಸಂದರ್ಶನಕ್ಕೆ ಸಿದ್ದಗೊಳ್ಳುವ ವೇಳೆ ದೆಹಲಿಯ ಕನ್ನಡ ಸಂಘದಿಂದ ಉತ್ತಮ ಸಹಾಯ ಸಿಕ್ಕಿತ್ತು, ಅಲ್ಲಿನ ಅಣಕು ಸಂದರ್ಶನದಿಂದಾಗಿ ಮುಖ್ಯ ಸಂದರ್ಶನದಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿತು.


●.ತಮ್ಮ ಸಾಧನೆಯ ಹಾದಿ ಹೇಗಿತ್ತು, ತಾವು ಎದುರಿಸಿದ್ದ ಸವಾಲುಗಳು ಹೇಗಿತ್ತು.?

•► ನಮ್ಮದು ಮೇಲ್ಮಧ್ಯಮ ವರ್ಗದ ಕುಟುಂಬವಾಗಿದ್ದು, ಪರೀಕ್ಷೆ ತಯಾರಿ ಸಂದರ್ಭದಲ್ಲಿ ಯಾವುದೇ ಹಣಕಾಸಿನ ತೊಂದರೆ ಎದುರಾಗಿಲ್ಲ. ಅಲ್ಲದೇ ನಾನೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಆರ್ಥಿಕವಾಗಿ ಸವಾಲುಗಳು ಇರಲಿಲ್ಲ, ಆದರೆ ಮಾನಸಿಕವಾಗಿ ಕೆಲವು ತೊಂದರೆಗಳು ಎದುರಾಗುತ್ತಿದ್ದವು, ಸ್ನೇಹಿತರೆಲ್ಲ ಒಳ್ಳೆಯ ಕೆಲಸಕ್ಕೆ ಸೇರಿ ಕೈತುಂಬ ಸಂಪಾದಿಸುತ್ತಿದ್ದ ದಿನಗಳಲ್ಲಿ ಸುಮ್ಮನೆ ಕುಳಿತು ಓದುವುದು ಕಷ್ಟವಾಗುತ್ತಿತ್ತು, ಸಂಬಂಧಿಕರು, ಹಿತೈಷಿಗಳ ಪ್ರಶ್ನೆಗಳಿಂದ ಹೆಚ್ಚು ಇರಿಸು ಮುರಿಸು ಉಂಟಾಗುತ್ತಿತ್ತು. ಇದನ್ನು ಬಿಟ್ಟರೆ ಬೇರೆ ಯಾವುದು ತೊಂದರೆ ಅನ್ನಿಸಲಿಲ್ಲ.


●.ನಿಮ್ಮ ಸಾಧನೆಗೆ ಕುಟುಂಬ ವರ್ಗದ ಸಹಕಾರ ಹೇಗಿತ್ತು?

•► ನನ್ನ ಸಾಧನೆಗೆ ಪ್ರಮುಖ ಕಾರಣ ತಂದೆ-ತಾಯಿ ಎಂದರೆ ತಪ್ಪಿಲ್ಲ. ಅಮ್ಮ, ನಾನೆಷ್ಟು ಕಷ್ಟ ಅನುಭವಿಸಿದ್ದೇನೆ ಅದಕ್ಕಿಂತ ಹೆಚ್ಚಿನ ಕಷ್ಟವನ್ನು ನನಗಾಗಿ ಪಟ್ಟಿದ್ದಾರೆ. ಅವರ ಆಶಿರ್ವಾದ ಮತ್ತು ಹಾರೈಕೆಯೇ ಈ ಸಾಧನೆಗೆ ಕಾರಣವಾಗಿದೆ. ಇದರೊಂದಿಗೆ ನನ್ನ ಸ್ನೇಹಿತರು ಸಹ ನನ್ನ ಸಾಧನೆಯ ಬೆನ್ನಿಗೆ ನಿಂತ್ತಿದ್ದರು. ನಾನು ಯಾವಾಗಲು ಒಂಟಿಯಾಗಿ ಕುಳಿತು ಓದುತ್ತಿಲಿಲ್ಲ. ಸ್ನೇಹಿತರೊಂದಿಗೆ ಸೇರಿ ಓದುತ್ತಿದ್ದೆ, ಹನುಮಂತ್, ಜಯಂತ್ ಮತ್ತು ಸುನೀಲ್ ಇವರೆಲ್ಲರ ಸಹಾಯ ಮರೆಯಲು ಸಾಧ್ಯವಿಲ್ಲ.


●.ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಗುರಿ, ಯೋಜನೆಗಳೇನು?

•► ಸದ್ಯ 48ನೇ ಸ್ಥಾನ ಪಡೆದಿರುವುದೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಆಕಾಂಕ್ಷೆ ಇದೆ. ಯುಪಿಎಸ್’ಸಿ ಯಾವ ಕೆಲಸ ನೀಡದರೂ ಶ್ರದ್ದೆಯಿಂದಲೇ ಮಾಡುತ್ತೇನೆ.


●.ಮುಂದೆ ಯುಪಿಎಸ್’ಸಿ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ನಿಮ್ಮ ಕಿವಿಮಾತು.

•► ಒಮ್ಮೆ ಈಜಲು ನೀರಿಗೆ ಬಿದ್ದ ಮೇಲೆ ಗುರಿ ಸಿಗುವವರೆಗೂ ಈಜಿರಿ. ಮಧ್ಯದಲ್ಲಿ ಗುರಿಯಿಂದ ಹಿಂತಿರುಗುವವರ ಸಂಖ್ಯೆ ಜಾಸ್ತಿ ಇದೆ. ಆದರೆ ಈ ರೀತಿ ಮಾಡಬೇಡಿ. ಒಂದು ಬಾರಿ ಸಾಧಿಸಬೇಕು ಎಂದು ಸಂಕಲ್ಪ ಮಾಡಿದ ಮೇಲೆ ಗುರಿ ಮುಟ್ಟುವವರೆಗೂ ನಿಲ್ಲಬೇಡಿ. ಆಗ ಮಾತ್ರ ಸಾಧನೆ ಸಾಧ್ಯ. ಕಷ್ಟಪಟ್ಟು ಓದುವುದಕ್ಕಿಂದ ಇಷ್ಟ ಪಟ್ಟು ಓದಿ, ಉತ್ತಮ ಇಂಗ್ಲೀಷ್ ಭಾಷೆ ಕರಗತ ಮಾಡಿಕೊಳ್ಳಿ, ಧೈರ್ಯವಾಗಿ ಮಾತನಾಡಿ, ಕಾನ್ಫಿಡೆಂಟ್ ಆಗಿರಿ. ಈ ಅಂಶಗಳು ಸಂದರ್ಶನದಲ್ಲಿ ಸಹಾಯಕ್ಕೆ ಬರಲಿದೆ.


●.ಕೊನೆಯದಾಗಿ ಏನನ್ನಾದರೂ ಹೇಳಲು ಬಯಸುವಿರಾ..?

•► ನನ್ನ ಸಾಧನೆಗೆ ಸಹಾಯ ಮಾಡಿದ ಎಲ್ಲಾರಿಗೂ ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲೂ ನನ್ನ ತಾಯಿ ಮತ್ತು ಸ್ನೇಹಿತರಿಗೆ ನಾನು ಚಿರಋಣಿ.

– ಶ್ರೀನಿಧಿ ಶ್ರೀಕರ್.
(Courtesy : ಸುವರ್ಣನ್ಯೂಸ್)

No comments:

Post a Comment