"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 27 May 2016

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : •►ಸಾಗರಮಾಲೆ ಯೋಜನೆ ಎಂದರೇನು? ಅದರ ಉದ್ದೇಶ, ಪ್ರಯೋಜನಗಳನ್ನು ವಿವರಿಸಿ. (Sagar Mala project in Coastal Economic Zone)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
•►ಸಾಗರಮಾಲೆ ಯೋಜನೆ  ಎಂದರೇನು? ಅದರ ಉದ್ದೇಶ, ಪ್ರಯೋಜನಗಳನ್ನು ವಿವರಿಸಿ. 
(Sagar Mala project in Coastal Economic Zone ) 
━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)


ಭಾರತ ನೈಸರ್ಗಿಕ ಸಂಪತ್ತುಗಳಿಂದ ಸಂಪದ್ಭರಿತವಾದ ದೇಶ. ಭಾರತದ ಭೂ ಪ್ರದೇಶದ ಮೂರೂ ಕಡೆ ನೀರಿನಿಂದ ಅವೃತ್ತವಾಗಿದ್ದು, ಅಪಾರವಾದ ಜಲರಾಶಿಯಿದೆ. ಆದರೆ ಈ ಜಲಸಂಪತ್ತಿನ ಸರಿಯಾದ ಪ್ರಯೋಜನ ಪಡೆದುಕೊಳ್ಳಲು ಭಾರತವು ಮುಂದಾಗಿರಲಿಲ್ಲ. ಜಲಸಾರಿಗೆ ಯನ್ನು ಬಳಸಿ, ಬಂದರು ಸ್ಥಾಪಿಸಿ ವಹಿವಾಟು ನಡೆಸುವುದು ಭಾರತಕ್ಕೆ ತೀರಾ ಹೊಸದಲ್ಲವಾದರೂ, ಇತರ ಸಾರಿಗೆ ಮತ್ತು ವ್ಯವಹಾರ ಕ್ಷೇತ್ರಗಳಂತೆ ಈ ಕ್ಷೇತ್ರ ಬೆಳವಣಿಗೆ ಕಂಡಿರಲಿಲ್ಲ. ಇದನ್ನು ಕಂಡ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಂದರುಗಳ ಸರ್ವತೋಮುಖ ಅಭಿವೃದ್ಧಿ ಮತ್ತು ವ್ಯಾಪಾರ-ವಹಿವಾಟು ವೃದ್ಧಿಗೆ ಪೂರಕವಾಗಿರುವ ಯೋಜನೆಯೊಂದನ್ನು ರೂಪಿಸಿದರು. ಅದೇ ಸಾಗರಮಾಲೆ ಯೋಜನೆ.

●.ಸಾಗರಮಾಲೆ ಯೋಜನೆಯು ಅನುಷ್ಠಾನಕ್ಕೆ ಬರಬೇಕಿದ್ದ ಸಮಯದಲ್ಲಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ 2003ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಯುಪಿಎ ಸರ್ಕಾರ ಆಡಳಿತಕ್ಕೆ ಬಂತು. ಇದರಿಂದ ಸಾಗರಮಾಲೆ ಯೋಜನೆಯು ಸಾಗರದಲ್ಲೇ ಉಳಿಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಯೋಜನೆಯನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


☀ಸಾಗರಮಾಲೆ ಯೋಜನೆಯ ಉದ್ದೇಶವೇನು?

●.ವಿಶೇಷ ಆರ್ಥಿಕ ವಲಯ, ಐಟಿ ಎಸ್​ಇಜೆಡ್, ಕೈಗಾರಿಕಾ ವಲಯಗಳಿರುವಂತೆಯೇ, ಪ್ರಮುಖ ಬಂದರು ಮತ್ತು ಸುತ್ತಲಿನ ಪ್ರದೇಶಗಳನ್ನು ಸಾಗರಮಾಲೆ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಿ, ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ, ರಫ್ತು ಮತ್ತು ವಾಣಿಜ್ಯ ಚಟುವಟಿಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಸಾಗರಮಾಲೆ ಯೋಜನೆಯಡಿ ಕೇಂದ್ರ ಸರ್ಕಾರವು ಬಂದರು ಮತ್ತು ಜಲಸಾರಿಗೆ ಸಚಿವಾಲಯದ ಮೂಲಕ ಈಗ ಕಾರ್ಯಾಚರಿಸುತ್ತಿರುವ ಪ್ರಮುಖ 14 ಬಂದರುಗಳ ಪ್ರದೇಶವನ್ನು ಸಿಇಜೆಡ್, ಅಂದರೆ ಕೋಸ್ಟಲ್ ಎಕನಾಮಿಕ್ ಝೋನ್ ಎಂದು ತನ್ನ ವ್ಯಾಪ್ತಿಗೊಳಪಡಿಸಿ, ಆ ಪ್ರದೇಶಗಳಲ್ಲಿ ಬಂದರುಗಳ ಅತ್ಯಾಧುನೀಕರಣ ಕಾಮಗಾರಿ ಕೈಗೊಳ್ಳುತ್ತದೆ. ಅದಕ್ಕಾಗಿ ನಿರ್ದಿಷ್ಟ ಕಾರ್ಯವ್ಯಾಪ್ತಿ ಮತ್ತು ಪ್ರದೇಶಗಳನ್ನು ವಶಪಡಿಸಿಕೊಳ್ಳಲಿದೆ.


☀ಸಾಗರಮಾಲೆ ಯೋಜನೆಯ ಪ್ರಯೋಜನಗಳು :

●.ಭಾರತದ ಸಾಗರ ತೀರದ ರಾಜ್ಯಗಳ ಪ್ರಮುಖ ಬಂದರುಗಳು ಈ ಯೋಜನೆಯ ವ್ಯಾಪ್ತಿಗೊಳಪಡುತ್ತವೆ. ಇದರಲ್ಲಿ ಕರ್ನಾಟಕದ ಪ್ರಮುಖ ಬಂದರು ಮಂಗಳೂರಿನ ಎನ್​ಎಂಪಿಟಿ ಕೂಡಾ ಸೇರಿದೆ. ಬಂದರಿಗೆ ಅಗತ್ಯ, ಉತ್ತಮ ದರ್ಜೆಯ ರಸ್ತೆ ಸಂಪರ್ಕ, ರೈಲು ಸಂಪರ್ಕ, ಇತರ ಎಲ್ಲ ವಿಧದ ಕಾಗೋ ಸೇವೆಗಳನ್ನು ಸಂಪರ್ಕ ಕಲ್ಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಮತ್ತು ಉನ್ನತ ದರ್ಜೆಯ ಸೇವೆ ಒದಗಿಸುವ ಯೋಜನೆ ಸಾಗರಮಾಲೆದ್ದು. ಬಂದರಿನ ಮೂಲಕ ರಫ್ತು ಹೆಚ್ಚು ಮಾಡಿ, ಆಮದು ಕಡಿಮೆ ಮಾಡಿಕೊಂಡರೆ, ದೇಶದ ಆದಾಯಕ್ಕೂ ಮತ್ತು ಉದ್ಯಮಗಳಿಗೂ ಅನುಕೂಲವಾಗುವುದರಿಂದ, ಸಾಗರಮಾಲೆ ಯೋಜನೆಯಲ್ಲಿ ಬಂದರು ಮತ್ತು ಜಲಸಾರಿಗೆಯ ಪೂರ್ಣ ಪ್ರಯೋಜನ ಪಡೆಯಲಾಗುತ್ತದೆ. ಬಂದರು ಹೊಂದಿರುವ ಇತರ ದೇಶಗಳಿಗೆ ಹೋಲಿಸಿದರೆ, ವ್ಯಾಪಾರ ಮತ್ತು ವಹಿವಾಟು ಭಾರತದಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿರುವುದರಿಂದ ಈ ಅವಕಾಶ ಕಲ್ಪಿಸಲಾಗುತ್ತದೆ.

●.ನಿರೀಕ್ಷೆಯಂತೆ ಯೋಜನೆಯು ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ ಉದ್ದೇಶಿತ 14 ಸಿಇಝೆಡ್​ಗಳಿಂದ ಭಾರತದ ವಾರ್ಷಿಕ ರಫ್ತು ವಹಿವಾಟಿಗೆ ವಿವಿಧ ಉದ್ಯಮಗಳಿಂದ 7.25 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಸೇರ್ಪಡೆಯಾಗಲಿದೆ.

●.ಬಂದರುಗಳನ್ನು ಮತ್ತು ಅವುಗಳ ಸುತ್ತಲಿನ ಪ್ರದೇಶಗಳನ್ನು ಈಗಿರುವ ಸ್ಥಿತಿ ಮತ್ತು ಪ್ರಾದೇಶಿಕ ಭಿನ್ನತೆ ನೋಡಿಕೊಂಡು ಪ್ರಮುಖ, ಸಾಮಾನ್ಯ ಮತ್ತು ಪ್ರಾಸ್ತಾವಿತ ಬಂದರುಗಳೆಂದು ವಿಂಗಡಿಸಿ, ಅಲ್ಲಿನ ಮೂಲಸೌಕರ್ಯ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗುತ್ತದೆ.

●.ಸರಕು ಉತ್ಪಾದನಾ ಕೇಂದ್ರಗಳಿಂದ ನೇರ ಬಂದರಿಗೆ ಕಾಗೋ ಮೂಲಕ ಸಾಗಿಸುವ ಸೌಲಭ್ಯ ಕಲ್ಪಿಸಲಾಗುತ್ತದೆ. ಸಂಪರ್ಕ ರಸ್ತೆ, ರೈಲು ಮಾರ್ಗ ಅಭಿವೃದ್ಧಿ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ತ್ವರಿತ ಮತ್ತು ಸರಳವಾಗಿ ಬಂದರು ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.

●.ಸಾಗರಮಾಲೆ ಯೋಜನೆಯು ಕೇವಲ ಉದ್ಯಮ ಮತ್ತು ವ್ಯವಹಾರ ವೃದ್ಧಿಗೆ ಕ್ರಮ ಕೈಗೊಳ್ಳುವುದಲ್ಲ, ಬದಲಾಗಿ ಬಂದರು ಮತ್ತು ಜಲಸಾರಿಗೆಯನ್ನು ಅತ್ಯಾಧುನಿಕ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳಿಸುವುದರಿಂದ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಲಾಗುತ್ತದೆ.

●.ಕರಾವಳಿ ಪ್ರದೇಶಗಳ ಅಭಿವೃದ್ಧಿಗೂ ಇದು ಸಹಕರಿಸುತ್ತದೆ. ಇದರೊಂದಿಗೆ ಸಾಗರ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಮಾರ್ಚ್ 25, 2015ರಂದು ಸಂಪುಟವು ಸಾಗರಮಾಲೆ ಯೋಜನೆಗೆ ಅನುಮತಿ ನೀಡಿದ್ದು, ಇದರನ್ವಯ 14 ಸಿಇಝೆಡ್ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ 12 ಪ್ರಮುಖ ಬಂದರುಗಳನ್ನು ಮತ್ತು 1208 ದ್ವೀಪಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

●.ಕರ್ನಾಟಕದ ಮಂಗಳೂರು ಬಂದರೂ ಕೂಡಾ ಈ ಪಟ್ಟಿಯಲ್ಲಿದೆ. ಜುಲೈ 31, 2015ರಂದು ಬೆಂಗಳೂರಿನಲ್ಲಿ ನಡೆದ ಸಚಿವಾಲಯದ ಕಾರ್ಯಕ್ರಮದಲ್ಲಿ ಸಾಗರಮಾಲೆ ಯೋಜನೆಗೆ ಚಾಲನೆ ನೀಡಲಾಗಿದೆ.

●.ನ್ಯಾಶನಲ್ ಸಾಗರಮಾಲೆ ಅಪೆಕ್ಸ್ ಕಮಿಟಿ-ಎನ್​ಎಸ್​ಎಸಿ, ಬಂದರು ಸಚಿವಾಲಯ, ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು, ಬಂದರು ಮತ್ತು ಸಾರಿಗೆ ಸಚಿವಾಲಯ ಈ ಯೋಜನೆಗೆ ಸಹಕರಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತದೆ.

●.ಸಾಗರಮಾಲೆ ಯೋಜನೆಯಡಿಯಲ್ಲಿ ಭಾರತದ 7,500 ಕಿಮೀ. ಕರಾವಳಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಸುಮಾರು 70 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

No comments:

Post a Comment