"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 11 July 2015

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ. (Kannada Grammar)

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೧. ಲೋಪಸಂಧಿ
•┈┈┈┈┈┈┈┈┈•
●. ಊರು + ಅಲ್ಲಿ ಎಂಬಲ್ಲಿ ಉ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಕೂಡಿಸಿ ಬರೆದರೆ ಊರ್ ಅಲ್ಲಿ = ಊರಲ್ಲಿ ಎಂದಾಯಿತು.  ಅಂದರೆ ರಕಾರದಲ್ಲಿರುವ ಉ ಕಾರ ಬಿಟ್ಟುಹೋಯಿತು.

— ಇದರ ಹಾಗೆ ಕೆಳಗಿನ ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ:-
ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು)
(ಉ+ ಇ)
ಆಡು + ಇಸು = ಆಡಿಸು (ಉಕಾರ ಇಲ್ಲದಾಯಿತು)
(ಉ+ ಇ)
ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲದಾಯಿತು)
(ಎ+ ಒ)
ನಿನಗೆ + ಅಲ್ಲದೆ = ನಿನಗಲ್ಲದೆ (ಎಕಾರ ಇಲ್ಲದಾಯಿತು)
(ಎ+ ಅ)
ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟುಹೋಯಿತು)
(ಉ+ ಎ)
ಮೇಲಿನ ಉದಾಹರಣೆಗಳಲ್ಲೆಲ್ಲಾ, ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು (ಲೋಪವಾಗುವುದು) ಕಂಡು ಬರುತ್ತದೆ.

●.ಆದರೆ ಕೆಲವು ಕಡೆಗೆ ಸ್ವರದ ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು.
— ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-
ಮನೆ + ಇಂದ – ಇಲ್ಲಿ ಲೋಪಮಾಡಿದರೆ ಮನಿಂದ ಎಂದಾಗುವುದು
(ಎ+ ಇ)
ಗುರು + ಅನ್ನು – ಇಲ್ಲಿ ಲೋಪಮಾಡಿದರೆ ಗುರನ್ನು ಆಗುವುದು
(ಉ+ ಅ)
ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು. ಅಲ್ಲಿ ಬೇರೆ ವಿಧಾನವನ್ನು (ಮಾರ್ಗವನ್ನು) ಅನುಸರಿಸಬೇಕಾಗುವುದು.

●.ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು ಹೀಗೆ ಹೇಳಬಹುದು:-
— (೧೬) ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.
ಉದಾಹರಣೆಗೆ:-
ಊರು + ಅಲ್ಲಿ = ಊರಲ್ಲಿ (ಉಕಾರ ಲೋಪ)
(ಉ+ ಅ)
ದೇವರು + ಇಂದ = ದೇವರಿಂದ (ಉಕಾರ ಲೋಪ)
(ಉ+ ಇ)
ಬಲ್ಲೆನು + ಎಂದು = ಬಲ್ಲೆನೆಂದು (ಉಕಾರ ಲೋಪ)
(ಉ+ ಎ)
ಏನು + ಆದುದು = ಏನಾದುದು (ಉಕಾರ ಲೋಪ)
(ಉ+ ಆ)
ಇವನಿಗೆ + ಆನು = ಇವನಿಗಾನು (ಎಕಾರ ಲೋಪ)
(ಎ+ ಆ)
ಅವನ + ಊರು = ಅವನೂರು (ಅಕಾರ ಲೋಪ)
(ಅ+ ಊ)


●.೨. ಆಗಮಸಂಧಿ
•┈┈┈┈┈┈┈┈┈┈•

★ ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ.
ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ಮನನ್ನು ಆಗುವುದು,
ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ಗುರನ್ನು ಆಗುವುದು
ಎಂಬುದನ್ನು ಹಿಂದೆ ತಿಳಿದಿದ್ದೀರಿ.

—  ಹಾಗಾದರೆ ಮನೆ + ಅನ್ನು, ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ.  ಆಗ ಆ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ಯ್ಕಾರವನ್ನೋ, ವ್ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು.  ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ.  ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ.

— ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-


●.ಯಕಾರಾಗಮ ಬರುವುದಕ್ಕೆ :
•┈┈┈┈┈┈┈┈┈┈┈┈┈┈┈•
ತೆನೆ+ಅನ್ನು=ತೆನೆ+ಯ್+ಅನ್ನು=ತೆನೆಯನ್ನು
ಕೈ+ಅನ್ನು=ಕೈ+ಯ್+ಅನ್ನು=ಕೈಯನ್ನು
ಚಳಿ+ಅಲ್ಲಿ=ಚಳಿ+ಯ್+ಅಲ್ಲಿ=ಚಳಿಯಲ್ಲಿ
ಮಳೆ+ಇಂದ=ಮಳೆ+ಯ್+ಇಂದ=ಮಳೆಯಿಂದ
ಗಾಳಿ+ಅನ್ನು=ಗಾಳಿ+ಯ್+ಅನ್ನು=ಗಾಳಿಯನ್ನು
ಕೆರೆ+ಅಲ್ಲಿ=ಕೆರೆ+ಯ್+ಅಲ್ಲಿ=ಕೆರೆಯಲ್ಲಿ
ಮರೆ+ಇಂದ=ಮರೆ+ಯ್+ಇಂದ=ಮರೆಯಿಂದ


●.ವಕಾರಾಗಮ ಬರುವುದಕ್ಕೆ :
•┈┈┈┈┈┈┈┈┈┈┈┈┈┈•
ಗುರು+ಅನ್ನು=ಗುರು+ವ್+ಅನ್ನು=ಗುರುವನ್ನು
ಪಿತೃ+ಅನ್ನು=ಪಿತೃ+ವ್+ಅನ್ನು=ಪಿತೃವನ್ನು
ಮಗು+ಇಗೆ=ಮಗು+ವ್+ಇಗೆ=ಮಗುವಿಗೆ
ಆ+ಉಂಗುರ=ಆ+ವ್+ಉಂಗುರ=ಆವುಂಗುರ
ಆ+ಊರು=ಆ+ವ್+ಊರು=ಆವೂರು
ಆ+ಒಲೆ=ಆ+ವ್+ಒಲೆ=ಆವೊಲೆ
ಪೂ+ಅನ್ನು=ಪೂ+ವ್+ಅನ್ನು=ಪೂವನ್ನು
ಮೇಲೆ ತೋರಿಸಿರುವ ಯಕಾರಗಮ, ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂಬಾರದು, ಬರೆಯಲೂ ಬಾರದು.  ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ.


●.ಆದುದರಿಂದ ಈ ಆಗಮಸಂಧಿಗೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
— (೧೭) ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.

●.ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-

●.(೧) ಯಕಾರಾಗಮ ಸಂಧಿ:-
•┈┈┈┈┈┈┈┈┈┈┈┈┈┈┈┈┈•
— ಆ, ಇ, ಈ, ಎ, ಏ, ಐ ಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ ಯ್ ಕಾರವು ಆಗಮವಾಗುವುದು.
— ಉದಾಹರಣೆಗೆ:-
[1]ಕಾ+ಅದೆ =ಕಾ+ಯ್+ಅದೆ=ಕಾಯದೆ
(ಆ+ಅ)
ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು
(ಇ+ಅ)
[2]ಮೀ+ಅಲು=ಮೀ+ಯ್+ಅಲು=ಮೀಯಲು
(ಈ+ಅ)
ಕೆರೆ+ಅನ್ನು=ಕೆರೆ+ಯ್+ಅನ್ನು=ಕೆರೆಯನ್ನು
(ಎ+ಅ)
[3]ಮೇ+ಇಸು=ಮೇ+ಯ್+ಇಸು=ಮೇಯಿಸು
(ಏ+ಇ)
ಮೈ+ಅನ್ನು=ಮೈ+ಯ್+ಅನ್ನು=ಮೈಯನ್ನು
(ಐ+ಅ)


●.(೨) ವಕಾರಾಗಮ ಸಂಧಿ:-
•┈┈┈┈┈┈┈┈┈┈┈┈┈┈┈•
★(i) ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ವ್ ಕಾರವು ಆಗಮವಾಗಿ ಬರುವುದು.
ಉದಾಹರಣೆಗೆ:-
ಮಡು+ಅನ್ನು=ಮಡು+ವ್+ಅನ್ನು=ಮಡುವನ್ನು
(ಉ+ಅ)
ಪೂ+ಇಂದ=ಪೂ+ವ್+ಇಂದ=ಪೂವಿಂದ
(ಊ+ಇ)
ಮಾತೃ+ಅನ್ನು=ಮಾತೃ+ವ್+ಅನ್ನು=ಮಾತೃವನ್ನು
(ಋ+ಅ)
ಗೋ+ಅನ್ನು=ಗೋ+ವ್+ಅನ್ನು=ಗೋವನ್ನು
(ಓ+ಅ)


★(ii) ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು.
(ಪ್ರಕೃತಿ ಪ್ರತ್ಯಯ ಸೇರುವಾಗ ಮಾತ್ರ ಈ ಸಂಧಿಯಾಗುವುದು)
ಉದಾಹರಣೆಗೆ:-
ಹೊಲ+ಅನ್ನು=ಹೊಲ+ವ್+ಅನ್ನು=ಹೊಲವನ್ನು
ನೆಲ+ಅನ್ನು= ನೆಲ+ವ್+ಅನ್ನು=ನೆಲವನ್ನು
ಕುಲ+ಅನ್ನು=ಕುಲ+ವ್+ಅನ್ನು=ಕುಲವನ್ನು
ತಿಲ+ಅನ್ನು=ತಿಲ+ವ್+ಅನ್ನು=ತಿಲವನ್ನು
ಮನ+ಅನ್ನು=ಮನ+ವ್+ಅನ್ನು=ಮನವನ್ನು


★(iii) ಆ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ವ ಕಾರವು ಆಗಮವಾಗಿ ಬರುವುದುಂಟು.
(ಸಂಧಿಯನ್ನು ಮಾಡದೆಯೂ ಹೇಳಬಹುದು)
ಉದಾಹರಣೆಗೆ:-
ಆ + ಉಂಗುರ = ಆ + ವ್ + ಉಂಗುರ = ಆವುಂಗುರ
ಆ + ಊಟ = ಆ + ವ್ + ಊಟ = ಆವೂಟ
ಆ + ಒಂಟೆ = ಆ + ವ್ + ಒಂಟೆ = ಆವೊಂಟೆ
ಆ + ಓಟ = ಆ + ವ್ + ಓಟ = ಆವೋಟ
ಸಂಧಿ ಮಾಡದಿರುವುದಕ್ಕೆ-ಆ ಉಂಗುರ, ಆ ಊಟ, ಆ ಒಂಟೆ, ಆ ಓಟ (ಹೀಗೂ ಹೇಳಬಹುದು)


★(iv) ಈ ಶಬ್ದದ ಮುಂದೆ ಉ, ಊ, ಒ, ಓಗಳು ಬಂದರೆ, ಯಕಾರಾಗಮ ವನ್ನಾದರೂ ಮಾಡಬಹುದು; ಅಥವಾ ವಕಾರಾಗಮವನ್ನಾದರೂ ಮಾಡಬಹುದು
ಉದಾಹರಣೆಗೆ:-
ಈ + ಉದಕ = ಈ + ಯ್ + ಉದಕ=ಈಯುದಕ
ಈವುದಕ
ಈ + ಊರು = ಈ + ಯ್ + ಊರು=ಈಯೂರು
ಈವೂರು
ಈ + ಊಟ = ಈ + ಯ್ + ಊಟ=ಈಯೂಟ
ಈವೂಟ
ಈ + ಒಲೆ = ಈ + ಯ್ + ಒಲೆ=ಈಯೊಲೆ
ಈವೊಲೆ
ಈ + ಒಂಟೆ = ಈ + ಯ್ + ಒಂಟೆ=ಈಯೊಂಟೆ
ಈವೊಂಟೆ
ಈ + ಓಕುಳಿ = ಈ + ಯ್ + ಓಕುಳಿ=ಈಯೋಕುಳಿ
ಈವೋಕುಳಿ
ಈ + ಓಲೆ = ಈ + ಯ್ + ಓಲೆ=ಈಯೋಲೆ
ಈವೋಲೆ

— ಈ ಮೇಲೆ ಹೇಳಿದ ಕಡೆಗಳಲ್ಲಿ ಸಂಧಿಗಳನ್ನು ಮಾಡದೆಯೆ ಈ ಉದಕ, ಈ ಊರು, ಈ ಒಂಟೆ, ಈ ಓಲೆ ಹೀಗೆಯೂ ಬರೆಯಬಹುದು.

★(v) ಓ ಕಾರದ ಮುಂದೆ ಸ್ವರ ಬಂದರೆ ವ ಕಾರಾಗಮ ಬರುವುದೆಂದು ಹಿಂದೆ ಹೇಳಿದೆಯಷ್ಟೆ. ಆದರೆ ಕೆಲವು ಕಡೆ ಯಕಾರಾಗಮ ಬರುವುದುಂಟು.
ಉದಾಹರಣೆಗೆ:-
ಗೋ + ಅನ್ನು = ಗೋವನ್ನು (ವಕಾರಾಗಮ ಬಂದಿದೆ)
(ಓ+ ಅ)
ನೋ + ಅಲು = ನೋಯಲು (ಯಕಾರಾಗಮ ಬಂದಿದೆ)
(ಓ+ ಅ)


...ಮುಂದುವರೆಯುವುದು.

No comments:

Post a Comment