"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 15 July 2015

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು )..ಮುಂದುವರಿದ ಭಾಗ. (Kannada Grammar)

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೩. ಆದೇಶ ಸಂಧಿ
•┈┈┈┈┈┈┈┈┈┈┈•

— ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು.  ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯ ನಡೆಯುವುದೆಂಬುದನ್ನು ತಿಳಿಯೋಣ.

ಮಳೆ + ಕಾಲ = ಮಳೆಗಾಲ (ಮಳೆ + ಗ್‌ಆಲ)
ಚಳಿ + ಕಾಲ = ಚಳಿಗಾಲ (ಚಳಿ +ಗ್‌ಆಲ)
ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್‌ಆವರೆ)
ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್‌ಎಟ್ಟು)
ಕಣ್ + ಪನಿ = ಕಂಬನಿ (ಕಂ + ಬ್‌ಅನಿ)
— ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ.

ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ.
ಬೆಟ್ಟ+ ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆದ ಕಾರ ಬಂದಿದೆ.  [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ]
ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ.

— ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು.
★ ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.

— ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.

★ (i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.
ಉದಾಹರಣೆಗೆ:-
ಹುಲ್ಲು + ಕಾವಲು=*ಹುಲ್ಲು + ಗ್ ಆವಲು=ಹುಲ್ಲುಗಾವಲು
(ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ=ಹಳ + ಗ್ ಅನ್ನಡ=ಹಳಗನ್ನಡ
(ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ=ಕಳೆ + ಗ್ ಊಡಿ=ಕಳೆಗೂಡಿ
(ಕಕಾರಕ್ಕೆ ಗಕಾರಾದೇಶ)
ಎಳೆ+ ಕರು=ಎಳೆ + ಗ್ ಅರು=ಎಳೆಗರು
(ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ=ಮನೆ + ಗ್ ಎಲಸ=ಮನೆಗೆಲಸ
(ಕಕಾರಕ್ಕೆ ಗಕಾರಾದೇಶ)
ಮೈ+ ತೊಳೆ=ಮೈ + ದ್ ಒಳೆ=ಮೈದೊಳೆ
(ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು=ಮೇರೆ + ದ್ ಅಪ್ಪು=ಮೇರೆದಪ್ಪು
(ತಕಾರಕ್ಕೆ ದಕಾರಾದೇಶ)
ಕಣ್+ ಪನಿ=ಕಣ್ + ಬ್ ಅನಿ=ಕಂಬನಿ
(ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು=ಬೆನ್ + ಬ್ ಅತ್ತು=(ಬೆಂಬತ್ತು)
(ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು
ಮನೆ + ಕಟ್ಟು     =        ಮನೆಕಟ್ಟು
ತಲೆ + ಕಟ್ಟು      =        ತಲೆಕಟ್ಟು

★ (ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ ಬ ಮ ವ್ಯಂಜನಗಳಿಗೆ ವ ಕಾರವು ಆದೇಶವಾಗಿ ಬರುವುದು
ಉದಾಹರಣೆಗೆ:-
ನೀರ್ + ಪೊನಲ್=ನೀರ್ + ವ್ ಒನಲ್ = ನೀರ‍್ವೊನಲ್
(ಪಕಾರಕ್ಕೆ ವಕಾರಾದೇಶ)
ಎಳ+ ಪೆರೆ=ಎಳ + ವ್ ಎರೆ = ಎಳವರೆ
(ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ=ಬೆಮರ್ + ವ್ ಅನಿ = ಬೆಮರ್ವನಿ
(ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ=ಬೇರ್ + ವ್ ಎರಸಿ = ಬೇರ‍್ವೆರಸಿ
(ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು=ಕಡು + ವ್ ಎಳ್ಪು =  ಕಡುವೆಳ್ಪು
(ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ=ಎಳ + ವ್ ಅಳ್ಳಿ = ಎಳವಳ್ಳಿ
(ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು=ಮೆಲ್ + ವ್ ಆತು = ಮೆಲ್ವಾತು
(ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ=ನೆಲೆ + ವ್ ಅನೆ = ನೆಲೆವನೆ
(ಮಕಾರಕ್ಕೆ ವಕಾರಾದೇಶ)

— ಇದರ ಹಾಗೆ…….ಕಿಸುವಣ್, ಎಸರ‍್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.

ಈ ಆದೇಶವು ಕೆಲವು ಕಡೆ ಬರುವುದಿಲ್ಲ.
ಅದಕ್ಕೆ ಉದಾಹರಣೆ:-
ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)

★ (iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.
ಉದಾಹರಣೆಗೆ:-
(೧) ಸಕಾರಕ್ಕೆ ಚಕಾರ ಬರುವುದಕ್ಕೆ__ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ

(೨) ಸಕಾರಕ್ಕೆ ಜಕಾರ ಬರುವುದಕ್ಕೆ__ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್

(೩) ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ

— ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್‌ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.

[1] ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು.  ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.

[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.

[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.

[4] ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು.  ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು.

ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು.

[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ.  ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ.  ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು

[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ.  ಆಗ ಸ್ಪಷ್ಟವಾಗಿ ತಿಳಿದುಬರುವುದು.  ಈಗ ಸಂಧಿಕಾರ‍್ಯಗಳನ್ನಷ್ಟು ಗಮನಿಸಿದರೆ ಸಾಕು.
* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್‌ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು.  ಇದರಂತೆ ಉಳಿದವುಗಳನ್ನೂ ತಿಳಿಯಬೇಕು.

[7] ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್‌ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು.  ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ.  ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.


●.ಪ್ರಕೃತಿ ಭಾವ
ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು.

— ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-
ಅಹಹಾ+ ಎಷ್ಟು ಚೆನ್ನಾಗಿದೆ?
ಅಯ್ಯೋ+ ಇದೇನು?
ಓಹೋ+ ಇದೇನು?
ಓಹೋ+ ಅವನು ಬಂದನೇ?
ಅಕ್ಕಾ + ಇತ್ತ ಬಾ

— ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ.

 ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ).
— ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ.

ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ.
— ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು.  ಅವು ಹೇಗಿವೆಯೋ ಹಾಗೇ ಬಿಡಬೇಕು.  ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ.

★ ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ‍್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.

●.ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ‍್ಯವಾಗದಿರು ವಿಕೆಯನ್ನು) ಗಮನಿಸಿರಿ:-

(i) ಪ್ಲುತಸ್ವರಗಳ ಮುಂದೆ ಸ್ವರಪರವಾದರೆ ಸಂಧಿಕಾರ‍್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಅಣ್ಣಾ(೩)+ಇತ್ತಬಾ=ಅಣ್ಣಾ, ಇತ್ತ ಬಾ
ದೇವರೇ(೩)+ಇನ್ನೇನು ಗತಿ=ದೇವರೇ, ಇನ್ನೇನು ಗತಿ
ಅಮ್ಮಾ(೩)+ಅದುಬೇಕು=ಅಮ್ಮಾ, ಅದು ಬೇಕು
ರಾಮಾ(೩)+ಅಲ್ಲಿ ನೋಡು=ರಾಮಾ, ಅಲ್ಲಿ ನೋಡು
ಗುರುವೇ(೩)+ಉದ್ಧರಿಸು=ಗುರುವೇ, ಉದ್ಧರಿಸು

(ii) ಭಾವಸೂಚಕಾವ್ಯಯಗಳಾದ ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ‍್ಯಗಳಾಗುವುದಿಲ್ಲ.
(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ.  ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)
ಉದಾಹರಣೆಗೆ:-
ಅಯ್ಯೋ + ಅವನಿಗೇನಾಯಿತು?  = ಅಯ್ಯೋ! ಅವನಿಗೇನಾಯಿತು?
ಅಬ್ಬಾ + ಅದು ಹಾವೇ?  =  ಅಬ್ಬಾ! ಅದು ಹಾವೇ?
ಅಕ್ಕಟಾ + ಇಂದ್ರನಿಗೆ ಹಾನಿಯೇ?  = ಅಕ್ಕಟಾ! ಇಂದ್ರನಿಗೆ ಹಾನಿಯೇ?
ಓಹೋ + ಅವನೇನು?  =  ಓಹೋ! ಅವನೇನು?
ಎಲಾ + ಅಧಮನೇ?  =  ಎಲಾ! ಅಧಮನೇ
ಛೇ + ಅದೆಲ್ಲಿ  =  ಛೇ! ಅದೆಲ್ಲಿ.

(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಆ + ಅಂಗಡಿ = ಆ ಅಂಗಡಿ
ಆ + ಅರಸು = ಆ ಅರಸು
ಆ + ಐಶ್ವರ್ಯ = ಆ ಐಶ್ವರ್ಯ
ಆ + ಆಡು = ಆ ಆಡು
ಆ + ಆಕಳು = ಆ ಆಕಳು
ಆ + ಔನ್ನತ್ಯ = ಆ ಔನ್ನತ್ಯ
ಆ + ಔದಾರ‍್ಯ = ಆ ಔದಾರ್ಯ
[1] ಪ್ಲುತಸ್ವರವೆಂದರೆ ಸಂಬೋಧನೆಯಲ್ಲಿ ಬರುವ ಸ್ವರ.  ಈ ಉದಾಹರಣೆಗಳಲ್ಲಿ(೩) ಈ ಗುರುತಿನಿಂದ ಸೂಚಿಸಿರುವ ಸ್ವರಗಳೆಲ್ಲ ಪ್ಲುತಗಳೆಂದು ತಿಳಿಯಬೇಕು.  ಹಿಂದೆ ಸ್ವರಗಳನ್ನು ಹೇಳಿದ ಕಡೆ ಅಂದರೆ ಸಂಜ್ಞಾಪ್ರಕರಣದಲ್ಲಿ ಈ ವಿಷಯ ತಿಳಿಸಿದೆ.

[2] ಈ ಭಾವಸೂಚಕಾವ್ಯಯಗಳನ್ನು ನಿಪಾತಾವ್ಯಯಗಳೆಂದೂ ಕರೆಯುವರು.


(Courtesy : Kannada Deevige)

No comments:

Post a Comment