"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 22 July 2015

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು) (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


      - ಇದುವರೆಗೆ ಕನ್ನಡ ಭಾಷೆಯಲ್ಲಿ ಬರುವ ಲೋಪ, ಆಗಮ, ಆದೇಶ ಸಂಧಿಗಳ ಬಗೆಗೆ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮ ಸಂಧಿಗಳಾಗುತ್ತವೆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಆಗುವ ಆದೇಶ ಸಂಧಿಗಳ ಸ್ಥೂಲಪರಿಚಯ ಮಾಡಿಕೊಂಡಿರಿ. ಅನಂತರ ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇರುವ ಪ್ರಕೃತಿಭಾವವನ್ನೂ ಅರಿತಿರಿ. ಇದನ್ನು ಕೆಳಗೆ ಸೂಚಿಸಿರುವ ರೇಖಾ ಚಿತ್ರಗಳ ಮೂಲಕ ಸ್ಥೂಲವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿರಿ.


●.(೧) ಕನ್ನಡ ಸಂಧಿಗಳು:
•┈┈┈┈┈┈┈┈┈┈┈┈┈┈┈┈•
ಲೋಪ ಸ್ವರ+ಸ್ವರ-ಪೂರ್ವದ ಸ್ವರಕ್ಕೆ ಅರ್ಥಹಾನಿಯಾಗದಾಗ ಲೋಪಆಗಮ ಸ್ವರ+ಸ್ವರ-ಮಧ್ಯದಲ್ಲಿ ಯಕಾರ ಅಥವಾ ವಕಾರಾಗಮ  ಆದೇಶ
ಸ್ವರ+ವ್ಯಂಜನ, ವ್ಯಂಜನ+ವ್ಯಂಜನ.

★ ೧. ಉತ್ತರಪದದ ಆದಿಯ ಕ ತ ಪ ಗಳು ಗ ದ ಬ ಗಳಾಗುತ್ತವೆ.
೨.  ಪ ಬ ಮ ಗಳಿಗೆ ವಕಾರ ಆದೇಶವಾಗುತ್ತದೆ.
೩.  ಸ ಕಾರಕ್ಕೆ ಚ ಜ ಛ ಗಳು ಆದೇಶವಾಗುತ್ತವೆ.

★ (೨) ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು ಪ್ರಕೃತಿಭಾವ


●.ಸಂಸ್ಕೃತ ಸಂಧಿಗಳು
━━━━━━━━━━━━━━━

೧. ಸಂಸ್ಕೃತ ಸ್ವರ ಸಂಧಿಗಳು :
━━━━━━━━━━━━━━━━━
(೧) ರಾಮಾಯಣವು ಮಹೋನ್ನತ ಗ್ರಂಥ.
(೨) ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.
ಮೇಲಿನ ಈ ಎರಡೂ ವಾಕ್ಯಗಳು ಕನ್ನಡ ವಾಕ್ಯಗಳೇ ಅಲ್ಲವೆ?  ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದಗಳೇ ಹೆಚ್ಚಾಗಿವೆ.

— ರಾಮಾಯಣ  ಮಹೋನ್ನತ  ಗ್ರಂಥ  ಸೂರ‍್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಈ ಏಳೂ ಶಬ್ದಗಳು ಸಂಸ್ಕೃತ ಶಬ್ದಗಳೇ ಆಗಿವೆ.  ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದಗಳು ಬಂದು ಸೇರಿವೆ.  ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ. ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಬಂದು ಬಳಸಲ್ಪಡುತ್ತಿರುವ ಶಬ್ದಗಳ ಸಂಧಿಕಾರ‍್ಯಗಳೇನೆಂಬುದನ್ನು ಕನ್ನಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.

★ ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.

★ ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು.


★ ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ.

(೧) ಸವರ್ಣ ದೀರ್ಘ ಸಂಧಿ
•┈┈┈┈┈┈┈┈┈┈┈┈┈┈┈┈•
(ಅ) ವಿದ್ಯಾಭ್ಯಾಸ ಮಾಡಿದನು.
(ಆ) ರಾಮಾಯಣವನ್ನು ಓದು.
(ಇ) ಹರೀಶ್ವರನು ಕನ್ನಡ ಕವಿ.
(ಈ) ಗುರೂಪದೇಶವನ್ನು ಪಡೆ.

ಈ ವಾಕ್ಯಗಳಲ್ಲಿ ವಿದ್ಯಾಭ್ಯಾಸ ರಾಮಾಯಣ ಹರೀಶ್ವರ ಗುರೂಪದೇಶ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರರ್ಯಗಳನ್ನು ಗಮನಿಸಿರಿ.
ವಿದ್ಯಾ + ಅಭ್ಯಾಸ = ವಿದ್‌ಯ್ + ಆ + ಭ್ಯಾಸ = ವಿದ್ಯಾಭ್ಯಾಸ  (ಆ + ಅ)

★ ಇಲ್ಲಿ ಆ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಈ ಎರಡೂ ಸ್ವರಗಳು ಸವರ್ಣಸ್ವರಗಳು, ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು.  ಒಂದು ಹ್ರಸ್ವ, ಒಂದು ದೀರ್ಘ ಅಷ್ಟೆ.

— ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು.  ಹೀಗೆ ಬರುವುದು ಆದೇಶವೆಂದು ಹಿಂದೆ ತಿಳಿದಿದ್ದೀರಿ.
ಇದರ ಹಾಗೆಯೇ ಹರೀಶ್ವರ ಶಬ್ದವು-
ಹರಿ + ಈಶ್ವರ = ಹರ್ + ಈ + ಶ್ವರ = ಹರೀಶ್ವರ-ಎಂಬಲ್ಲಿ (ಇ + ಈ)
ಇ ಕಾರದ ಮುಂದೆ ಈ ಕಾರ ಬಂದಿದೆ.  ಇವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಈ ಎಂಬ ದೀರ್ಘಸ್ವರ ಆದೇಶವಾಗಿ ಬರುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೦) ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

— ಉದಾಹರಣೆಗೆ:-
ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಸುರ + ಅಸುರ = ಸುರಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವರ ಆದೇಶ)
(ಆ+ ಆ)
ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(ಇ+ ಇ)
ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(ಇ+ ಈ)
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(ಈ+ ಈ)
ಗುರು + ಉಪದೇಶ = ಗರೂಪದೇಶ (ಉಕಾರಕ್ಕೆ ಉಕಾರ ಪರವಾಗಿ ಊಕಾರಾದೇಶ)
(ಉ+ ಉ)
ವಧೂ + ಉಪೇತ = ವಧೂಪೇತ (ಊಕಾರಕ್ಕೆ ಉಕಾರಪರವಾಗಿ ಊಕಾರಾದೇಶ)
(ಊ+ ಉ)


●.(೨) ಗುಣಸಂಧಿ
•┈┈┈┈┈┈┈┈┈┈┈┈•
(ಅ) ಸುರೇಶನು ಬಂದನು.
(ಆ) ದೇವೇಂದ್ರನ ಸಭೆ.
(ಇ) ಮಹೇಶನನ್ನು ನೋಡು.
(ಈ) ಸೂರ್ಯೋದಯವಾಯಿತು.
(ಉ) ವಾಲ್ಮೀಕಿ ಮಹರ್ಷಿಗಳು ಬಂದರು

— ಈ ವಾಕ್ಯಗಳಲ್ಲಿರುವ ಸುರೇಶ, ದೇವೇಂದ್ರ, ಮಹೇಶ, ಸುರ್ಯೋದಯ, ಮಹರ್ಷಿ

★ ಈ ಶಬ್ದಗಳನ್ನು ಬಿಡಿಸಿ ಬರೆದರೆ ಹೇಗಾಗುವುವು ನೋಡಿರಿ.
ಸುರ + ಈಶ = ಸುರೇಶ (ಅ + ಈ = ಏ)
(ಅ+ ಈ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
(ಅ+ ಇ)
ಮಹಾ + ಈಶ = ಮಹೇಶ (ಆ + ಈ = ಏ)
(ಆ+ ಈ)
ಸೂರ‍್ಯ + ಉದಯ = ಸೂರ‍್ಯೋದಯ (ಅ + ಉ = ಓ)
(ಅ+ ಉ)
ಮಹಾ + ಋಷಿ = ಮಹರ್‌ಷಿ (ಆ + ಋ = ಆರ್)
(ಆ+ ಋ)
ಎಲ್ಲಾ ಉದಾಹರಣೆಗಳಲ್ಲೂ ಪೂರ್ವದ ಸ್ವರವು ಅ ಅಥವಾ ಆ ಆಗಿವೆ.

★ ಪರದಲ್ಲಿ (ಎದುರಿನಲ್ಲಿ) ಇ, ಈ, ಉ, ಋ ಇತ್ಯಾದಿ ಸ್ವರಗಳಿವೆ.  ಇ ಅಥವಾ ಈ ಪರವಾದಲ್ಲೆಲ್ಲಾ ಏ ಕಾರ ಬಂದಿದೆ.  ಉ ಪರವಾದಲ್ಲಿ ಓ ಕಾರ ಬಂದಿದೆ.  ಋ ಪರವಾದಲ್ಲಿ ಅರ್ ಕಾರ ಬಂದಿದೆ.  ಅಂದರೆ ಪೂರ್ವದ ಮತ್ತು ಪರದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ಏ ಓ ಅರ್ ಗಳು ಆದೇಶಗಳಾಗಿ ಬಂದಿವೆ ಎಂದ ಹಾಗಾಯಿತು.

●.ಇದಕ್ಕೆ ಸಾಮಾನ್ಯ ಸೂತ್ರವನ್ನು ಹೀಗೆ ಹೇಳಬಹುದು.
(೨೧) ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.

— ಉದಾಹರಣೆಗೆ:-
ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಅ+ ಇ)
ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಆ+ ಇ)
ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(ಆ+ ಈ)
ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(ಅ+ ಉ)
ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(ಅ+ ಊ)
ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಅ+ ಋ)
ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಆ+ ಋ)


●.(೩) ವೃದ್ಧಿ ಸಂಧಿ
•┈┈┈┈┈┈┈┈┈┈┈┈•
(೧) ಅವನು ಏಕೈಕ ವೀರನು.
(೨) ಕೃಷ್ಣದೇವರಾಯ ಅಷ್ಟೈಶ್ವರ‍್ಯದಿಂದ ಕೂಡಿದ್ದನು.
(೩) ಹಿಮಾಲಯದಲ್ಲಿ ವನೌಷಧಿಗಳುಂಟು.
(೪) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ.

★ ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೈಶ್ವರ‍್ಯ, ವನೌಷದಿ, ಮಹೌನ್ನತ್ಯ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು:-
ಏಕ + ಏಕ = ಏಕ್ + ಐಕ (ಅ + ಏ + ಐ)
(ಅ+ ಏ)
ಅಷ್ಟ + ಐಶ್ವರ‍್ಯ = ಅಷ್ಟ್ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ = ಐ)
(ಅ+ ಐ)
ವನ + ಓಷಧಿ = ವನ್ + ಔಷಧಿ = ವನೌಷಧಿ (ಅ + ಓ = ಔ)
(ಅ+ ಓ)
ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ (ಆ + ಔ = ಔ)
(ಆ+ ಔ)

★ ಪೂರ್ವದಲ್ಲಿ ಎಲ್ಲ ಕಡೆಗೂ ಅ ಅಥವಾ ಆ ಸ್ವರಗಳಿವೆ. ಎದುರಿಗೆ ಏ, ಐ, ಓ, ಔ ಪರವಾಗಿವೆ.  ಏ ಅಥವಾ ಐ ಪರವಾದಾಗ ಒಂದು ಐ ಕಾರವೂ, ಓ ಅಥವಾ ಔ ಪರವಾದಾಗ ಒಂದು ಔ ಕಾರವೂ ಆದೇಶಗಳಾಗಿ ಅಂದರೆ ಆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ.

●.ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು:-
  — ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.

ಉದಾಹರಣೆಗೆ:-
ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(ಅ+ ಏ)
ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಅ+ ಐ)
ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಆ+ ಐ)
ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(ಅ+ ಓ)
ಘನ + ಔದಾರ‍್ಯ = ಘನೌದಾರ‍್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಅ+ ಔ)
ಮಹಾ + ಔದಾರ‍್ಯ = ಮಹೌದಾರ‍್ಯ (ಆಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಆ+ ಔ)


●.(೪) ಯಣ್ ಸಂಧಿ
•┈┈┈┈┈┈┈┈┈┈┈┈┈•
— ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ.  ಅದರ ಪ್ರಕಾರ ಯಣ್ ಎಂದರೆ ಯ ವ ರ ಲ ಈ ನಾಲ್ಕು ವ್ಯಂಜನಗಳು. ಯಣ್ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ.

— ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-
(೧) ಅವನು ಅತ್ಯಂತ ಪರಾಕ್ರಮಿ.
(೨) ಈ ಮನ್ವಂತರದಲ್ಲಿ ನಡೆಯಿತು.
(೩) ನಮ್ಮದು ಪಿತ್ರಾರ್ಜಿತವಾದ ಆಸ್ತಿ.

★ ಈ ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಈ ಶಬ್ದಗಳನ್ನು ಬಿಡಿಸಿ ಬರೆದರೆ:-
(೧) ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ (ಇ + ಅ = ಯ್‌ಅ)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.

(೨) ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.

(೩) ಪಿತೃ + ಆರ್ಜಿತ = ಪಿತ್‌ರ್ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್‌ಆ)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.

— ಹಾಗಾದರೆ ಪೂರ್ವದಲ್ಲಿರುವ ಇ, ಉ, ಋ ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು.  ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.  ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು.  ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೩) ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

— ಉದಾಹರಣೆಗೆ:-
ಅತಿ + ಅವಸರ = ಅತ್ಯವಸರ    (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಜಾತಿ + ಅತೀತ = ಜಾತ್ಯಾತೀತ  (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಗತಿ + ಅಂತರ = ಗತ್ಯಂತರ       (         “          )
(ಇ+ ಅ)
ಪ್ರತಿ + ಉತ್ತರ = ಪ್ರತ್ಯುತ್ತರ       (         “          )
(ಇ+ ಉ)
ಪತಿ + ಅರ್ಥ = ಪತ್ಯರ್ಥ           (         “           )
(ಇ+ ಅ)
ಅತಿ + ಆಶೆ = ಅತ್ಯಾಶೆ            (         “           )
(ಇ+ ಆ)
ಅಧಿ + ಆತ್ಮ = ಅಧ್ಯಾತ್ಮ          (           “           )
(ಇ+ ಆ)
ಗುರು + ಆಜ್ಞೆ = ಗುರ‍್ವಾಜ್ಞೆ       (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ಮನು + ಆದಿ = ಮನ್ವಾದಿ        (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಆ)
ವಧೂ + ಅನ್ವೇಷಣ = ವಧ್ವನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಅ)
ಪಿತೃ + ಅರ್ಥ = ಪಿತ್ರರ್ಥ          (ಋ ಕಾರಕ್ಕೆ ರ್ ಕಾರಾದೇಶ)
(ಋ+ ಅ)
ಮಾತೃ + ಅಂಶ = ಮಾತ್ರಂಶ    (           “           )
(ಋ+ ಅ)
ಕರ್ತೃ + ಅರ್ಥ = ಕರ್ತ್ರರ್ಥ        (         “           )
(ಋ+ ಅ)

(Courtesy :
kannada divige)

No comments:

Post a Comment