"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 12 September 2015

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ : ☀ಕರ್ನಾಟಕದ ಭೂ ಪ್ರದೇಶದ ಪ್ರಾಚೀನ ಪರಂಪರೆ ಹಾಗೂ ಕರ್ನಾಟಕ ಶಬ್ದದ ಪ್ರಾಚೀನತೆ : (The Ancient Heritage of the Karnataka Landscape and the Word "Karnataka")

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ :
☀ಕರ್ನಾಟಕದ ಭೂ ಪ್ರದೇಶದ ಪ್ರಾಚೀನ ಪರಂಪರೆ ಹಾಗೂ ಕರ್ನಾಟಕ ಶಬ್ದದ ಪ್ರಾಚೀನತೆ :
(The Ancient Heritage of the Karnataka Landscape and the Word "Karnataka")
━━━━━━━━━━━━━━━━━━━━━━━━━━━━━━━━━━━━━━━━━━━━━

★ಪ್ರಾಚೀನ ಕರ್ನಾಟಕದ ಇತಿಹಾಸ
(Ancient Karnataka History)

★ಸಾಮಾನ್ಯ ಕನ್ನಡ
(General Kannada)


●.ಮಹಾಭಾರತದ ಭೀಷ್ಮಪರ್ವದಲ್ಲಿ “ಕರ್ಣಾಟ ಮಹಿಷಕಾ ವಿಕಲ್ಪ ಮೂಷಕಸ್ತಥಾ ಝಿಲ್ಲಿಕಾಃ ಕುನ್ತಲಾಶ್ಚೈವ ಸೌಹೃದಾ ನಭಕಾನನ” ಎಂದು ಹೇಳಿದೆ. ಇದು ಕರ್ನಾಟಕದ ಮೊದಲ ಉಲ್ಲೇಖ ಎಂದು ಹೇಳಬಹುದು.

●.ಕರ್ನಾಟಕ ಇಂದಿನ ಕರ್ನಾಟಕದ ದಕ್ಷಿಣಭಾಗ, ಮಹಿಷಿಕಾ ಇಂದಿನ ಮೈಸೂರು ಜಿಲ್ಲೆಯ ಸುತ್ತಮುತ್ತಲ ಪ್ರದೇಶ, ಕುಂತಲಾ ಎಂಬುದು ಉತ್ತರ ಕರ್ನಾಟಕ ಪ್ರದೇಶ ಎಂದು ಹೇಳಬಹುದು.

●.ಇದನ್ನು ಬಿಟ್ಟರೆ ಕರ್ನಾಟಕದ ಭೂ ಪ್ರದೇಶದ ಪ್ರಾಚೀನತೆ ಇಂದಿನ ಕರ್ನಾಟಕದ ಭೂಪ್ರದೇಶದ ಪ್ರಾಚೀನ ಪರಂಪರೆಯು ನಮ್ಮ ದೇಶದ ಸುಮಾರು 4-5ನೇ ಶತಮಾನದ ಕೃತಿಗಳಾದ ಶೂದ್ರಕ ಕವಿಯ 'ಮೃಚ್ಛಕಟಿಕಾ', 'ವಿಷ್ಣುಧರ್ಮೋತ್ತರ ಪುರಾಣ', ಸುಮಾರು ಆರನೆಯ ಶತಮಾನದ ಕೃತಿಗಳಾದ ವರಾಹಮಿಹಿರನ 'ಬೃಹತ್ಸಂಹಿತೆ', 'ಭಾಗವತ ಪುರಾಣ', ಎಂಟನೇ ಶತಮಾನದ 'ಮಾರ್ಕಂಡೇಯ ಪುರಾಣ', 9ನೇ ಶತಮಾನದ ಮತಂಗನ 'ಬೃಹದ್ದೇಶಿ', ಇನ್ನೂ ಮುಂತಾದ ಕೃತಿಗಳಲ್ಲಿ ಕರ್ಣಾಟ(ಕ)ದ ಉಲ್ಲೇಖವಿದೆ.

●.ಉದ್ಯೋತನ ಸೂರಿ ಎಂಬ ಕವಿಯ 'ಕುವಲಯಮಾಲಾ ಕಥಾ' ಎಂಬ ಪ್ರಾಕೃತ ಕೃತಿಯಲ್ಲಿ (ಕ್ರಿ.ಶ.779) ತಮಿಳಿನ 'ಶಿಲಪ್ಪದಿಗಾರಂ' (ಕ್ರಿ.ಶ.600) ಕೃತಿಗಳಲ್ಲಿ ಕರ್ಣಾಟಕದ ಉಲ್ಲೇಖವಿದೆ.

●.ಕ್ರಿ.ಶ. 9-10ನೇ ಶತಮಾನಕ್ಕೆ ಸೇರಿದ ಅನೇಕ ಕನ್ನಡದ ಪ್ರಾಚೀನ ಕೃತಿಗಳಲ್ಲಿ “ಕರ್ಣಾಟ(ಕ), ಕರ್ನಾಟ(ಕ)” ಎಂಬುದನ್ನು ಕನ್ನಡದ ಪ್ರದೇಶ ಮತ್ತು ಕನ್ನಡ ಭಾಷೆ ಎಂಬ ಅರ್ಥದಲ್ಲಿ ಬಳಸಲಾಗಿದೆ.


●.ಶಾಸನಗಳ ವಿಚಾರಕ್ಕೆ ಬಂದರೆ ಕದಂಬರ ಶಾಂತಿವರ್ಮನ ಕ್ರಿ.ಶ.450ರ ಬೀರೂರು ತಾಮ್ರ ಶಾಸನದಲ್ಲಿ “ಸಮಸ್ತ ಕರ್ಣಾಟ” ಎಂಬ ಪದದ ಬಳಕೆಯಾಗಿದೆ.

●.ಕ್ರಿ.ಶ.633ರ ಗಂಗರ ದೊರೆ ಭೂವಿಕ್ರಮನ ಶಾಸನದಲ್ಲಿ 'ಕನ್ನಾಟ' ಎಂಬುದನ್ನು ಕನ್ನಡ ಭಾಷೆಯ ಅರ್ಥದಲ್ಲಿ ಬಳಸಿದೆ.

●.ರಾಷ್ಟ್ರಕೂಟರ ದೊರೆ ದಂತಿದುರ್ಗನ ಕ್ರಿ.ಶ.753ರ ಸಾಮನಗಢಾ ತಾಮ್ರಶಾಸನದಲ್ಲಿ 'ಕರ್ಣಾಟಕ ಬಲಮಚಿನ್ತ್ಯಮ್ ಅಜೇಯಮ್' ಎಂದು ಕನ್ನಡ ರಾಜರ ಸೇನೆಯನ್ನು ವರ್ಣಿಸಿದೆ.

●.ತಮಿಳಿನ ಪಾಂಡ್ಯ ರಾಜನ ಕ್ರಿ.ಶ.770ರ ವೇಳ್ವಿಕ್ಕುಡಿ ತಾಮ್ರಶಾಸನದಲ್ಲಿ “ಕರುನಾಡಗರ್” ಎಂಬ ಶಬ್ದದ ಪ್ರಯೋಗವಿದೆ.

●.ಇನ್ನು ಕೆಲವು ಪ್ರಾಚೀನ ತಮಿಳು ಶಾಸನಗಳಲ್ಲಿ “ಕನ್ನಾಟ, ಕನ್ನಾಟಕ, ಕನ್ನಾಡಗರುಂ” ಎಂಬ ಉಲ್ಲೇಖಗಳು ಕಂಡುಬರುತ್ತವೆ.

●.ಕನ್ನಡ ಭಾಷೆಯನ್ನು ಕರ್ನಾಟ ಭಾಷೆ, ಕರ್ನಾಟಕ ಭಾಷೆ ಎಂದು ಹೇಳಿರುವುದನ್ನು ಕ್ರಿ.ಶ.500ರ ನಂತರದ ಅನೇಕ ಕೃತಿಗಳಲ್ಲಿ ಕಾಣಬಹುದು. ಇದರಿಂದ ಕರ್ನಾಟ(ಕ), ಕರ್ಣಾಟ(ಕ), ಕರುನಾಡು, ಕರುನಾಡಗರ್ ಎಂಬುದನ್ನು ಒಂದು ಪ್ರದೇಶಕ್ಕೆ ಒಂದು ಭಾಷೆಗೆ ಮತ್ತು ಒಂದು ಜನಾಂಗಕ್ಕೆ ಬಳಸಿರುವುದು ಕಂಡುಬರುತ್ತದೆ. ಕಂನಾಡು ಎಂಬುದರಿಂದ ಕರ್ನಾಟಕ ಶಬ್ದ ರೂಪು ತಳೆದಿದೆ ಎಂದು ವಿದ್ವಾಂಸರು ಹೇಳುತ್ತಾರೆ.

(ಕೃಪೆ : ಜಾನಪದ)

No comments:

Post a Comment