"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 28 December 2016

☀️ ಭಾಗ - III: 2016 ರ ಪ್ರಮುಖ ಸ್ಥಳೀಯ, ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - III: 2016 ರ ಪ್ರಮುಖ ಸ್ಥಳೀಯ, ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.


•►  ಯೋಜನೆ -ಸಾಧನೆ


•► ಕೃಷಿ ಕ್ಷೇತ್ರದ ಮಟ್ಟಿಗೆ, ಈ ವರ್ಷವನ್ನು ಬರದೊಂದಿಗೆ ಸ್ವಾಗತಿಸಿ ಬರದೊಂದಿಗೆ ಬೀಳ್ಕೊಡುವಂತಾಗಿದೆ. ಇನ್ನೊಂದೆಡೆ ರೈತರ ಆತ್ಮಹತ್ಯೆ ಸರಣಿ ಮುಂದುವರಿಯಿತು. ಪಶುಭಾಗ್ಯ ಸೇರಿ ವಿವಿಧ ಯೋಜನೆಗಳು ಜಾರಿಗೊಂಡರೂ, ಕಬ್ಬು, ಈರುಳ್ಳಿ, ಅಡಕೆ ಮತ್ತಿತರೆ ಕೃಷಿಕರ ಬವಣೆ ತಪ್ಪಲಿಲ್ಲ. ಏತನ್ಮಧ್ಯೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಫಸಲ್ ಬಿಮಾ ಯೋಜನೆ ಕೃಷಿಕರ ಪಾಲಿಗೆ ಸ್ವಲ್ಪ ಸಮಾಧಾನ ನೀಡಿತು. ಸಾವಯವ ಕೃಷಿ, ದೇಸೀ ಗೋ ತಳಿ ಕಡೆಗೆ ಜನರ ಒಲವು ಹೆಚ್ಚಾಗಿದ್ದು ವರ್ಷದ ಟ್ರೆಂಡ್.


•►  ಕೃಷಿ ಟೆಕ್ನಾಲಜಿ ಪಾರ್ಕ್:
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜೋಳದ ಟೆಕ್ನಾಲಜಿ ಪಾರ್ಕ್ ಸ್ಥಾಪನೆಯಾಗಲಿದೆ.


•►  ಪರಂಪರಾಗತ ಕೃಷಿ ವಿಕಾಸ ಯೋಜನೆ:
ಆಯಾ ಪ್ರದೇಶದಲ್ಲಿ ಹೆಸರುವಾಸಿಯಾಗಿರುವ (ಉದಾಹರಣೆ ಭಟ್ಕಳದ ಮಲ್ಲಿಗೆ, ಬ್ಯಾಡಗಿ ಮೆಣಸಿನಕಾಯಿ, ನಂಜನಗೂಡಿನ ರಸಬಾಳೆ) ಬೆಳೆಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವ ಯೋಜನೆ ಇದಾಗಿದೆ. ಯೋಜನಾ ಪ್ರದೇಶವನ್ನು ನಿರ್ದಿಷ್ಟ ಸಾವಯವ ಕ್ಲಸ್ಟರ್ ಎಂದು ಗುರುತಿಸುವ ಕಾರ್ಯ ನಡೆದಿದೆ.


•►  ಹವಾಮಾನ ಆಧಾರಿತ ಬೆಳೆವಿಮೆ:
ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಅಡಕೆ, ತೆಂಗು, ಬಾಳೆ ಮುಂತಾದ 17 ಬೆಳೆಗಳು ಸೇರಿವೆ. ಆದರೆ, ಈ ವಿಮೆಯ ಕುರಿತು ಕರಾವಳಿ, ಮಲೆನಾಡಿನ ರೈತರಿಂದ ಕೆಲವು ಆಕ್ಷೇಪಗಳೂ ಕೇಳಿಬಂದವು.


•►  ಸಾವಯವಕ್ಕೆ ಸಹಕಾರ:
ಸಾವಯವ ಗ್ರಾಮ ಯೋಜನೆಯ ಮುಂದಿನ ಭಾಗವಾಗಿ ಸಾವಯವ ಪ್ರಾಂತೀಯ ಒಕ್ಕೂಟಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ 14 ಒಕ್ಕೂಟಗಳನ್ನು ಪ್ರಾರಂಭಿಸಲಾಗಿದೆ. ಸಾವಯವ ಉತ್ಪನ್ನಗಳಿಗೆ ಗುಂಪು ಪ್ರಮಾಣೀಕರಣಕ್ಕೆ ಅನುಕೂಲ ಮಾಡಿಕೊಡುವುದು, ಮಾರುಕಟ್ಟೆ ಒದಗಿಸುವುದು, ಉತ್ಪನ್ನಗಳ ಮೌಲ್ಯವರ್ಧನೆ ಈ ಒಕ್ಕೂಟಗಳ ಪ್ರಮುಖ ಕಾರ್ಯವಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ 2016-17ನೇ ಸಾಲಿನ ಬಜೆಟ್​ನಲ್ಲಿ ಸರ್ಕಾರ 412 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ ಐದು ಲಕ್ಷ ರೈತರನ್ನು ಸಾವಯವ ಕೃಷಿಗೆ ಒಳಪಡಿಸುವ ಗುರಿಯನ್ನೂ ಹೊಂದಿದೆ.


★ ಸಂಕಷ್ಟ-ಸಂತಾಪ

•►  ರೈತರ ಆತ್ಮಹತ್ಯೆ:
ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತರು ಸಂಕಷ್ಟ ಅನುಭವಿಸಿದ ವರ್ಷ ಇದು. ಸತತ ಮೂರನೇ ವರ್ಷವೂ ಮಳೆ ಕೈಕೊಟ್ಟ ಪರಿಣಾಮ, ಬೆಳೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಮತ್ತು ಸಾಲದ ಭಾರ ಮತ್ತಿತರ ಕಾರಣಗಳಿಂದಾಗಿ ಸಾವಿರಕ್ಕೂ ಅಧಿಕ ರೈತರು ನೇಣಿಗೆ ಶರಣಾಗಿದ್ದಾರೆ. ಕೃಷಿ ಇಲಾಖೆಯ ಅಂಕಿ ಅಂಶ ಪ್ರಕಾರ, 2015ರ ಏಪ್ರಿಲ್ 1ರಿಂದ 2016ರ ಜನವರಿ 11ರ ತನಕದ ಅವಧಿಯಲ್ಲಿ 1,002 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಜನವರಿಯಿಂದ ಡಿಸೆಂಬರ್ ಮಧ್ಯಭಾಗದವರೆಗಿನ ಅವಧಿಯಲ್ಲಿ 480 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


 •► ಬರ ಎದುರಿಸಲು ವಿಶೇಷ ಪ್ಯಾಕೇಜ್:
ಈ ವರ್ಷ ರಾಜ್ಯದಲ್ಲಿ ಮಳೆ ಇಲ್ಲದೇ ಶೇ. 50ರಷ್ಟು ಬೆಳೆ ನಷ್ಟವಾಗಿದೆ. 139 ತಾಲೂಕುಗಳು ಬರಪೀಡಿತವಾಗಿವೆ. 25 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮುಂಗಾರು ಹಾಗೂ ಹಿಂಗಾರು ಬೆಳೆ ನಷ್ಟವಾಗಿದೆ. ಕುಡಿಯುವ ನೀರು, ಮೇವು, ವಿದ್ಯುತ್ ಸಮಸ್ಯೆ ಭೀಕರವಾಗಿದೆ. ಮೂರು ವರ್ಷಗಳಿಂದ ಸತತ ಭೀಕರ ಬರದ ದವಡೆಗೆ ಸಿಲುಕಿರುವ ತುಮಕೂರು, ರಾಮನಗರ, ಕೋಲಾರ, ಕಲಬುರಗಿ, ಹಾಸನ, ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಗಳ ಆಯ್ದ 23 ತಾಲೂಕುಗಳಿಗೆ ರಾಜ್ಯಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ವಿಶೇಷ ಪ್ಯಾಕೇಜ್ ಘೊಷಿಸಿತ್ತು. ಕೃಷಿಭಾಗ್ಯ ಪ್ಯಾಕೇಜ್​ನ ಲಾಭ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ.50-75 ಸಬ್ಸಿಡಿ ನೀಡಿದರೆ, ಎಸ್ಸಿ, ಎಸ್ಟಿ ರೈತರಿಗೆ ಶೇ.90-95 ಸಹಾಯಧನ ಕಲ್ಪಿಸಿದೆ.


•►  ಕಸಾಯಿಖಾನೆಗೆ ಜಾನುವಾರು:
ರಾಜ್ಯದ ಬರಪೀಡಿತ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಕುಡಿಯಲು ನೀರು ಮತ್ತು ಮೇವು ಸಿಗದೆ ರೈತಾಪಿ ವರ್ಗ ಅನಿವಾರ್ಯವಾಗಿ ಕಡಿಮೆ ದರದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡಿದ ಪ್ರಕರಣಗಳು ವರದಿಯಾದವು. ಸರ್ಕಾರ ಮತ್ತು ಖಾಸಗಿ ಸಂಘ ಸಂಸ್ಥೆಗಳು ಮೇವು ಬ್ಯಾಂಕ್, ತಾತ್ಕಾಲಿಕ ಗೋಶಾಲೆಗಳನ್ನು ಸ್ಥಾಪಿಸಿದ್ದರಿಂದ ಕೆಲವೆಡೆ ರೈತರು ಜಾನುವಾರುಗಳನ್ನು ಅಲ್ಲಿ ಬಿಟ್ಟು ಕೊಂಚ ನಿರಾಳತೆ ಅನುಭವಿಸಿದರು.


•►  ಅಡಕೆ ಬೆಳೆಗಾರರ ಮೂಗಿಗೆ ತುಪ್ಪ:
ಗುಟ್ಖಾ ನಿಷೇಧ ಕ್ರಮ ಹಾಗೂ ಇನ್ನೊಂದೆಡೆ, ಆಮದು ನಿಯಂತ್ರಣ ಆಗದ್ದರಿಂದ ಅಡಕೆ ಮಾರುಕಟ್ಟೆಯಲ್ಲಿ ಹೇಳುವಂತಹ ಬದಲಾವಣೆ ಕಂಡು ಬರಲಿಲ್ಲ. ಧಾರಣೆಯೂ ಏರದೆ ಕುಸಿತವೇ ಕಂಡುಬಂದಿತ್ತು. ಈ ನಡುವೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಘೊಷಣೆ ಮಾಡುವ ಮೂಲಕ ಆಶಾಕಿರಣ ಮೂಡಿಸಿತು. ಆದರೆ ಇದು ಡಿಸೆಂಬರ್ ಅಂತ್ಯದವರೆಗೆ ಎನ್ನಲಾಗುತ್ತಿದ್ದು, ಕೇಂದ್ರ ಸರ್ಕಾರ ಅಡಕೆಬೆಳೆಗಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.


 •► ಈರುಳ್ಳಿ ರೈತರ ಗೋಳು:
ಈರುಳ್ಳಿ ಬೆಳೆದ ರೈತರು ಬೆಲೆ ಇಲ್ಲದೆ ರಸ್ತೆಯಲ್ಲಿ ಚೆಲ್ಲಬೇಕಾದ ಸ್ಥಿತಿಯನ್ನು ಎದುರಿಸಿದರು. ಹುಬ್ಬಳ್ಳಿ, ಗದಗ ಜಿಲ್ಲೆಯ ರೈತರು ಬೆಂಬಲ ಬೆಲೆಗೆ ಆಗ್ರಹಿಸಿ ಎಪಿಎಂಸಿಗಳ ಎದುರು ಪ್ರತಿಭಟನೆಯನ್ನೂ ನಡೆಸಿದರು.


•► ನೀರಿಗಾಗಿ ಹೋರಾಟ:
ಮಹದಾಯಿ, ಕಳಸಾ ಬಂಡೂರಿ ಹೋರಾಟ ಗದಗದಲ್ಲಿ ಇನ್ನೂ ಜೀವಂತವಾಗಿದೆ. ಗದಗ ಜಿಲ್ಲೆಯಲ್ಲಿ ನಡೆಸುತ್ತಿರುವ ಧರಣಿ 550 ದಿನಗಳನ್ನು ದಾಟಿದೆ. ಆದರೆ, ಯಾವುದೇ ರೀತಿಯ ಸಕಾರಾತ್ಮಕ ಭರವಸೆ ರೈತರಿಗೆ ದೊರೆತಿಲ್ಲ.


 •►  ಮಲೆನಾಡಲ್ಲಿ ಬಿಸಿಲ ಬೇಗೆ:
ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಧಿಕ ತಾಪಮಾನ ದಾಖಲಾಯಿತು.
ಮಲೆನಾಡು ಈ ಬಾರಿ ಅಕ್ಷರಶಃ ಬಯಲುಸೀಮೆಯಂತಾಗಿತ್ತು. ಹಿಂದೆಂದೂ ಕಂಡರಿಯದ ತಾಪಮಾನ ದಾಖಲಾಗಿ ಫೆಬ್ರವರಿ, ಮಾರ್ಚ್​ನಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿತು. ಮಲೆನಾಡಿನಲ್ಲಿ ಏಪ್ರಿಲ್ ಹಾಗೂ ಮೇನಲ್ಲಿ ಕೆಲವು ದಿನಗಳು ಮಾತ್ರ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತಷ್ಟೆ.


•►   ನವೋದ್ಯಮದ ಕೃಷಿ :
‘ಡಿಜಿಟಲ್ ಇಂಡಿಯಾ’ದ ಕನಸು ಗ್ರಾಮೀಣ ಭಾರತಕ್ಕೂ ಹರಡುತ್ತಿದೆ. ನವೋದ್ಯಮಗಳ ಪಾಲಿಗೆ ಕರ್ನಾಟಕ ಆಡುಂಬೊಲವಾಗಿದ್ದು, ಸರ್ಕಾರವೂ ಈ ರಂಗಕ್ಕೆ ಉತ್ತೇಜನ ನೀಡುತ್ತಿದ್ದು, ಕೃಷಿ ಕ್ಷೇತ್ರದಲ್ಲೂ ಒಂದಷ್ಟು ಬದಲಾವಣೆಗೆ ಇದು ಕಾರಣವಾಗಿದೆ. ಕೆಲವೊಂದು ನವೋದ್ಯಮಗಳು ಉತ್ತಮ ಪ್ರಗತಿ ದಾಖಲಿಸಿವೆ. ಫ್ಲೈಬರ್ಡ್ ಇನೋವೇಷನ್ಸ್, ನೂಬ್​ಸೋಲ್, ಕ್ರಾಪ್​ಇನ್ ಮುಂತಾದ ನವೋದ್ಯಮಗಳು ಈಗಾಗಲೇ ಕೃಷಿಕರ ಬದುಕಿನ ಜೊತೆಗೆ ಹಾಸುಹೊಕ್ಕಿವೆ.


•►  ಬರದ ಗರ

ತಮಿಳುನಾಡಿಗೆ ಕಾವೇರಿ ನೀರು ಹರಿಯಬಿಟ್ಟಿದ್ದು ಸೇರಿ ರಾಜ್ಯದಲ್ಲಿ ಬರ ಹಾಗೂ ನೆರೆ ಹಾವಳಿಯಿಂದಾಗಿ ಅಪಾರ ಬೆಳೆನಷ್ಟವಾಗಿದೆ. ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ 25.05 ಲಕ್ಷ ಹೆಕ್ಟೇರ್​ನಲ್ಲಿ ಬೆಳೆಹಾನಿಯಾಗಿದೆ. 23 ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದಾಗಿ 23.13 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದರೆ, ಅತಿವೃಷ್ಟಿಯಿಂದ ಹೈದರಾಬಾದ್ ಕರ್ನಾಟಕದ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 1.92 ಲಕ್ಷ ಹೆಕ್ಟೇರ್​ನಲ್ಲಿ ಬೆಳೆದು ನಿಂತಿದ್ದ ಬೆಳೆ ರೈತರ ಕೈ ಸೇರುತ್ತಿಲ್ಲ. ರಾಜ್ಯದಲ್ಲಿ ಮುಂಗಾರಿನಲ್ಲಿ ವಾಸ್ತವವಾಗಿ 73 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕು. ಆದರೆ, ಈ ಬಾರಿ ಶೇ.40ಕ್ಕೂ ಹೆಚ್ಚಿನ ಮಳೆ ಕೊರತೆಯಿಂದಾಗಿ 65 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಅದರಲ್ಲಿ 23.13 ಲಕ್ಷ ಹೆಕ್ಟೇರ್ ಹಾನಿಗೀಡಾಗಿದೆ. ರೈತರು ಎಕರೆಗೆ 10ರಿಂದ 15 ಸಾವಿರ ರೂ. ತನಕ ಪರಿಹಾರ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಬೆಳೆಗಳ ಆಧಾರದ ಮೇಲೆ ಪರಿಹಾರ ನೀಡುವುದಾದರೆ ಸುಮಾರು 2,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಅಗತ್ಯ ಇದೆ. ಆದರೆ, ಪರಿಹಾರಕ್ಕೆ ಹಣ ಹೊಂದಿಸುವುದೇ ಸರ್ಕಾರಕ್ಕೆ ಸವಾಲಾಗಿದೆ.



•►  ಪ್ರಮುಖ ಬೆಳೆ ಎಷ್ಟು ನಷ್ಟ?

ಮೆಕ್ಕೆಜೋಳ 8.39 ಲಕ್ಷ
ರಾಗಿ 4.70 ಲಕ್ಷ
ಶೇಂಗಾ 4.23 ಲಕ್ಷ
ಹತ್ತಿ 1.93 ಲಕ್ಷ
ಭತ್ತ 1.31 ಲಕ್ಷ
ಸಜ್ಜೆ 1.10 ಲಕ್ಷ
ಹೆಸರು 1.09 ಲಕ್ಷ
ತೊಗರಿ 93 ಸಾವಿರ
(2016 ಅಕ್ಟೋಬರ್ 6ರ ಮಾಹಿತಿ ಹೆಕ್ಟೇರ್​ಗಳಲ್ಲಿ)


•►  ಅರೇಕಾ ಟೀ

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ಅಡಕೆಯ ಬಳಕೆಗೆ ಹೊಸ ಸ್ವರೂಪ ಸಿಕ್ಕಿತು. ಅಡಕೆಯಿಂದ ತಯಾರಿಸಲಾದ ಚಹಾವನ್ನು ಜನವರಿ ಮೊದಲ ಭಾಗದಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಲಾಯಿತು. ‘ಅರೇಕಾ’ ಶೀರ್ಷಿಕೆಯಡಿ ಮಾರುಕಟ್ಟೆಗೆ ಬಂದಿರುವ ಈ ಹೊಸ ಉತ್ಪನ್ನವು ಶಿವಮೊಗ್ಗದ ಯುವಕ ನಿವೇದನ್ ನೆಂಪೆ ಅವರ ಸಂಶೋಧನೆಯ ಫಲ.


•►  ನೂತನ ದೇಸೀ ತಳಿ ನೋಂದಣಿ

ರಾಷ್ಟ್ರೀಯ ಜಾನುವಾರು ವಂಶವಾಹಿ ಸಂಪನ್ಮೂಲ ಸಂಸ್ಥೆ(ಎನ್​ಬಿಎಜಿಆರ್) ಯಲ್ಲಿ ಈ ವರ್ಷ ಜಾನುವಾರುಗಳ 9 ನೂತನ ದೇಸೀ ತಳಿಗಳನ್ನು ನೋಂದಾಯಿಸಲಾಗಿದೆ. ಉತ್ತರಾಖಂಡದ ಬಾದ್ರಿ(ಗೋವು), ತಮಿಳುನಾಡಿ ಕೋಡಿ, ನಿಕೋಬಾರ್ ದ್ವೀಪದ ಟೆರೆಸ್ಸಾ(ಆಡು), ಒಡಿಶಾದ ಕೇಂದ್ರಪಾದ, ತಮಿಳುನಾಡಿನ ಚೇವಾಡು(ಕುರಿ) ನಿಕೋಬಾರ್ ದ್ವೀಪದ ನಿಕೋಬಾರಿ, ನಾಗಾಲೆಂಡ್​ನ ತೆನ್ಯಿ ವೋ,ಅಸ್ಸಾಂನ ಡೂವ್(ಹಂದಿ), ಮಣಿಪುರದ ಕೌನಾಯೆನ್(ಕೋಳಿ).

Courtesy : Vijayavani newspaper)
...ಮುಂದುವರೆಯುವುದು. 

No comments:

Post a Comment