"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 7 August 2020

•► ️’ಥಾಲಿನಾಮಿಕ್ಸ್‌’ (Thalinomics)

•► ️’ಥಾಲಿನಾಮಿಕ್ಸ್‌’ (Thalinomics)
  ━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)


ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು Jan 2020 ರಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂಬುದರ ಕುರಿತು ವಿವರ ನೀಡಿದ ದೇಶದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌, ದೇಶದಲ್ಲಿ ಒಂದು ತಟ್ಟೆ ಊಟದ ಆರ್ಥಿಕತೆಯನ್ನು ವಿವರಿಸಲು ಬಳಸಿದ 'ಥಾಲಿನಾಮಿಕ್ಸ್‌' ಪದ ಈಗ ಗಮನ ಸೆಳೆದಿದೆ.

ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ.

ದೇಶದ ಸಾಮಾನ್ಯ ನಾಗರಿಕನ ದಿನನಿತ್ಯದ ಬದುಕಿನ ಮೇಲೆ ಆರ್ಥಿಕತೆಯ ಬೆಳವಣಿಗೆಗಳು ಯಾವೆಲ್ಲಾ ರೀತಿ ಪರಿಣಾಮ ಬೀರಬಲ್ಲವು ಎಂಬ ಕುರಿತಂತೆ ಒಂದೊಳ್ಳೆಯ ವಾಸ್ತವಿಕ ತುಲನೆಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ.

’ಥಾಲಿನಾಮಿಕ್ಸ್‌: ಭಾರತದ ಆಹಾರದ ತಟ್ಟೆಯ ಮೇಲಿನ ಆರ್ಥಿಕತೆ’ ಎಂಬ ಕಂಪ್ಯಾರಿಷನ್‌ ಒಂದನ್ನು ಮಾಡುವ ಮೂಲಕ, ಇಂದಿನ ಹಣದುಬ್ಬರಕ್ಕೆ ತಕ್ಕಂತೆ ದೇಶಾದ್ಯಂತ ಹೊಟೇಲ್‌/ರೆಸ್ಟಾರಂಟ್‌ಗಳಲ್ಲಿ ಥಾಲಿಯ (ಫುಲ್‌ ಮೀಲ್ಸ್‌/ಭೋಜನ/ಊಟ) ಬೆಲೆ ಎಷ್ಟಿದೆ ಎಂಬ ತುಲನಾತ್ಮಕ ವಿವರಣೆಯೊಂದನ್ನು ಸಮೀಕ್ಷೆಯಲ್ಲಿ ನಮೂದಿಸಲಾಗಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಹೊತ್ತಿನ ಊಟಕ್ಕೆ ಮಾಡುವ ಖರ್ಚನ್ನು ವಿವರಿಸುವ ನಿಟ್ಟಿನಲ್ಲಿ 'ಥಾಲಿನಾಮಿಕ್ಸ್‌: ಭಾರತದಲ್ಲಿ ಒಂದು ತಟ್ಟೆ ಊಟದ ಆರ್ಥಿಕತೆ' ಬಳಸಲಾಗಿದೆ. ಊಟಕ್ಕೆ (ಥಾಲಿ) ಭಾರತದಲ್ಲಿ ಖರ್ಚು ಮಾಡುವ ಹಣದ ಪರಿಮಾಣವನ್ನು ಗುರುತಿಸುವ ಪ್ರಯತ್ನ 2019–20ರ ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ.


ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ವಿ ಸುಬ್ರಹ್ಮಣಿಯನ್‌ ಈ ’ಥಾಲಿನಾಮಿಕ್ಸ್‌’ ಹಿಂದಿನ ಮೆದುಳಾಗಿದ್ದಾರೆ. ದೇಶದ 25 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ — ಧವಸ/ಧಾನ್ಯಗಳು, ತರಕಾರಿ ಹಾಗೂ ಇಂಧನದ ಬೆಲೆಯನ್ನು ಪರಿಗಣನೆಗೆ ತೆಗೆದುಕೊಂಡು, ಆಯಾ ರಾಜ್ಯಗಳಲ್ಲಿ ಒಂದು ಊಟದ ಬೆಲೆ ಏನಿದೆ ಎಂಬ ಅಂದಾಜನ್ನು ಕೊಡಮಾಡುವ ಯತ್ನವನ್ನು ’ಥಾಲಿನಾಮಿಕ್ಸ್‌’ನಲ್ಲಿ ಮಾಡಲಾಗಿದೆ.

ಏಪ್ರಿಲ್‌ 2006 – ಅಕ್ಟೋಬರ್‌ 2019ರವರೆಗಿನ ಅವಧಿಯನ್ನು ಪರಿಗಣನೆಗೆ ತೆ
ಗೆದುಕೊಂಡು ಮಾಡಲಾದ ಈ ಸಮೀಕ್ಷೆಯಲ್ಲಿ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ಮಾಡಲಾದ ಲೆಕ್ಕಾಚಾರದ ಪ್ರಕಾರ ದೇಶಾದ್ಯಂತ, ಶಾಖಾಹಾರಿ ಥಾಲಿಯ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ ಎನ್ನಲಾಗುತ್ತಿದೆ. 2019-20ರಲ್ಲಿ ಬೆಲೆಗಳಲ್ಲಿ ಏರಿಕೆಯಾದರೂ ಸಹ, ಹಣದುಬ್ಬರದ ವೃದ್ಧಿಯ ದರದ ಆಧಾರದಲ್ಲಿ, ಪ್ರಭಾವೀ ಬೆಲೆಯಲ್ಲಿ ಇಳಿಕೆಯಾಗಿದೆ.

2014-15ರಿಂದ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇವುಗಳ ಫಲವಾಗಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಏರಿಕೆ ಕಂಡಿದ್ದು, ಕೃಷಿ ಮಾರುಕಟ್ಟೆಗಳನ್ನು ಸಮರ್ಪಕವಾಗಿ ನಿಭಾಯಿಸಲು ತೆಗೆದುಕೊಂಡ ಕ್ರಮಗಳೂ ಸಹ ಸಾಕಷ್ಟು ಸಕಾರಾತ್ಮಕವಾಗಿ ಕೆಲಸ ಮಾಡಿವೆ ಎಂದು ತಿಳಿದುಬಂದಿದೆ.

2015-16ರಿಂದ ಆಚೆಗೆ, ದೇಶದ ಸರಾಸರಿ ಕುಟುಂಬವೊಂದು ಶಾಖಾಹಾರಿ ಥಾಲಿಯ ಮೇಲಿನ ಬೆಲೆಗಳಲ್ಲಿ ಪ್ರಭಾವೀ ಇಳಿಕೆ ಕಂಡುಬಂದ ಕಾರಣ, ವರ್ಷವೊಂದರಲ್ಲಿ 10,887 ರೂಗಳ ಉಳಿತಾಯ ಮಾಡಿದರೆ, ಮಾಂಸಾಹಾರಿ ಥಾಲಿಗಳ ಮೇಲೆ ವಾರ್ಷಿಕ 11,787ರೂಗಳನ್ನು ಉಳಿಸಿಕೊಂಡು ಬಂದಿದೆ.

ದೇಶದ ಸರಾಸರಿ ಕೈಗಾರಿಕಾ ಕಾರ್ಮಿಕನೊಬ್ಬನ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡ ವೇಳೆ, 2006-07ರಲ್ಲಿ ಇದ್ದದ್ದಕ್ಕಿಂತಲೂ 2019-20ರ ಅವಧಿಯಲ್ಲಿ ಶಾಖಾಹಾರಿ ಊಟವೊಂದರ ಬೆಲೆಯು ಕೈಗೆಟುಕುವ ಸಾಧ್ಯತೆಗಳು 29% ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಮಾಂಸಾಹಾರಿ ಊಟಗಳ ಬೆಲೆಗಳು 18% ಹೆಚ್ಚು ಕೈಗೆಟುಕುವಂತಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

2019-20ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕತೆಯ ಓಘವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ವಾಸ್ತವಿಕ ನಿದರ್ಶನಗಳ ಉಲ್ಲೇಖ ಮಾಡಲಾಗಿದೆ. 2020-21ರ ವಿತ್ತೀಯ ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿಯು 6 – 6.5% ಇರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಆಹಾರ ಒಂದೇ ಎಲ್ಲಕ್ಕೂ ಅಂತಿಮ ಅಲ್ಲ. ಆದರೆ, ಮಾನವ ಬಂಡವಾಳ ಹೆಚ್ಚಳಕ್ಕೆ ಆಹಾರ ಬಹು ಮುಖ್ಯವಾಗಿದೆ. ಇದು ರಾಷ್ಟ್ರದ ಸಂಪತ್ತು ಸೃಷ್ಟಿಗೆ ಪ್ರಮುಖವಾಗಿದೆ ಎನ್ನಲಾಗಿದೆ.

ಥಾಲಿ ಕೈಗೆಟುಕುವ ದರದಲ್ಲಿದೆಯೇ? ಥಾಲಿ ಮೇಲಿನ ಹಣದುಬ್ಬರ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ? ಸಸ್ಯಹಾರಿ ಮತ್ತು ಮಾಂಸಹಾರಿ ಥಾಲಿ ಎರಡಕ್ಕೂ ಹಣದುಬ್ಬರ ಒಂದೇ ರೀತಿಯಲ್ಲಿದೆಯೇ? ಭಾರತದ ವಲಯವಾರು ಥಾಲಿ ಬೆಲೆ ಹಣದುಬ್ಬರದಲ್ಲಿ ವ್ಯತ್ಯಾಸವಿದೆಯೇ? ಧಾನ್ಯ, ಬೇಳೆ–ಕಾಳುಗಳು, ತರಕಾರಿ ಅಥವಾ ಇಂಧನದ ಬೆಲೆ,..ಯಾವುದು ಥಾಲಿ ಬೆಲೆಯಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ? ಎಂಬ ಪ್ರಶ್ನೆಗಳನ್ನು ಸಮೀಕ್ಷೆ ಕೇಳಿಕೊಂಡಿದೆ.

No comments:

Post a Comment