"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 30 December 2014

☀ ಜನವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of January 2014)

☀ ಜನವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of January 2014)

★ಜನವರಿ 2014
(January 2014)


👉。ಭಾರತ ಸರ್ಕಾರ ಪ್ರತಿ ವರ್ಷ ಜನವರಿಯಲ್ಲಿ (7ರಿಂದ 9ರವರೆಗೆ) ‘ಪ್ರವಾಸಿ ಭಾರತೀಯ ದಿವಸ’ವನ್ನು ಆಚರಿಸುತ್ತದೆ. ಇದನ್ನು ‘ಅನಿವಾಸಿ ಭಾರತೀಯರ ದಿವಸ’ ಎಂದು ಸಹ ಕರೆಯಲಾಗುತ್ತದೆ. ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಭಾರತೀಯರು ಭಾಗವಹಿಸುತ್ತಾರೆ. ದೇಶದ ಸಂಸ್ಕೃತಿ, ಬಂಡವಾಳ ಹೂಡಿಕೆ, ಶಿಕ್ಷಣ, ಪ್ರವಾಸೋಧ್ಯಮ ಕುರಿತಂತೆ ಈ ಸಮಾವೇಶದಲ್ಲಿ ಚರ್ಚಿಸಲಾಗುವುದು. 2003ರಲ್ಲಿ ಮೊದಲ ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು.


👉。80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014ರ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯಿತು. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಾ.ಡಿಸೋಜ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದು ಮಡಿಕೇರಿಯಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ.


👉。ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿಪಡಿಸುವ ಮೂಲಕ ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ದಾಖಲೆ ಬರೆದಿದೆ. ಈ ರಾಕೆಟ್‌ ಮೂಲಕ ಜನವರಿ 5ರಂದು ಜಿಎಸ್‌ಎಲ್‌ವಿ–ಡಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಕ್ರಯೋಜಿನಿಕ್‌ ತಂತ್ರಜ್ಞಾನದಲ್ಲಿ ತಂಪಾಗಿರುವ ದ್ರವ ಇಂಧನ (cold liquid fuel) ಬಳಸಲಾಗುತ್ತದೆ. ಇದರಿಂದ ಭಾರೀ ತೂಕದ ಉಪಕರಣಗಳನ್ನು ಬ್ಯಾಹ್ಯಾಕಾಶಕ್ಕೆ ಸುಲಭವಾಗಿ ರವಾನಿಸಬಹುದು.


👉。ಭಾರತದಲ್ಲಿ ಬಾರೀ ಸಂಚಲನ ಉಂಟುಮಾಡಿದ್ದ ಜನ ಲೋಕಪಾಲ ಮಸೂದೆಗೆ ಜನವರಿ 1ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂಕಿತ ಹಾಕಿದರು. ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಹೋರಾಟ ನಡೆಸಿದ್ದರು. 1968ರಿಂದ 2001ರ ನಡುವೆ ವಿವಿಧ ಸರ್ಕಾರಗಳು ಲೋಕಪಾಲ ಮಸೂದೆಯನ್ನು 8 ಸಲ ಮಂಡನೆ ಮಾಡಿದ್ದವು ಆದರೆ ಈ ಮಸೂದೆ ಅಂಗೀಕಾರ ಪಡೆದಿರಲಿಲ್ಲ.


👉。ಜೈಪುರ ಸಾಹಿತ್ಯ ಉತ್ಸವ ಜನವರಿ 17 ರಿಂದ 21ರವರೆಗೆ ಜೈಪುರದಲ್ಲಿ ನಡೆಯಿತು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಈ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿದರು. ಈ ಉತ್ಸವದಲ್ಲಿ ಸೈರಸ್‌ ಮಿಸ್ತ್ರಿ ಅವರು ಬರೆದ ‘ಕ್ರಾನಿಕಲ್‌ ಆಫ್‌ ಎ ಕಾರ್ಫ್‌ ಬೇರರ್‌ (ಅನುವಾದಿತ) ಕೃತಿ 30 ಲಕ್ಷ ರೂಪಾಯಿ ಬಹುಮಾನ ಪಡೆಯಿತು.


👉。ಮಿ.ಸೆಕ್ಯೂರಿಟಿ ಎಂದೇ ಗುರುತಿಸಿಕೊಂಡಿದ್ದ ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶೆರೂನ್‌ (82)  ಜನವರಿ 11ರಂದು ನಿಧನರಾದರು. ಶೆರೂನ್‌ ಲೆಬನಾನ್‌ ಮತ್ತು ಇಸ್ರೇಲ್‌ ದೇಶಗಳ ಮೇಲೆ ದಾಳಿ ಮಾಡಿದ್ದರು. ಅವರು ಎಂಟು ತಿಂಗಳಿನಿಂದ ಕೋಮಾದಲ್ಲಿದ್ದರು.


👉。ಜನವರಿ 7ರಂದು ಭಾರತದ ಅತಿ ದೊಡ್ಡ ವಿಮಾನ ವಾಹಕ ನೌಕೆ ‘ಐಎನ್‌ಎಸ್‌ ವಿಕ್ರಮಾದಿತ್ಯ’ ಕಾರವಾರ ಬಂದರು ನೆಲೆಗೆ ಬಂದಿತು. ರಷ್ಯಾ ನಿರ್ಮಾಣದ ಈ ನೌಕೆಯನ್ನು ಭಾರತ ಸರ್ಕಾರ 14,260 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಸ್ವದೇಶಿ ನಿರ್ಮಿತ ಇಂತಹದ್ದೇ ನೌಕೆ ಕೊಚ್ಚಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ಅದು 2018ರ ವೇಳೆಗೆ ನೌಕಪಡೆಗೆ ಸೇರಲಿದೆ.


👉。ರಾಜ್ಯದ ಖ್ಯಾತ ಪಕ್ಷಿ ತಜ್ಞ ಮತ್ತು ಪರಿಸರ ಹೋರಾಟಗಾರ ಡಾ.ಜೆಮ್ಸ್‌ ಚೆನ್ನಪ್ಪ ಉತ್ತಂಗಿ (98) ಅವರು ಜನವರಿ *ರಂದು ನಿಧನರಾದರು. ಇವರು ಪಕ್ಷಿಗಳು ಮತ್ತು ಪರಿಸರ ಕುರಿತಂತೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಉತ್ತರ ಕರ್ನಾಟಕ ಮತ್ತು ‘ಉತ್ತರ ಗುಜರಾತಿನ ಕಪ್ಪೆಗಳು’, ‘ಅವಿಭಜಿತ ಧಾರವಾಡ ಜಿಲ್ಲೆಯಲ್ಲಿನ ಪಕ್ಷಿಗಳು’ ಪ್ರಮುಖ ಸಂಶೋಧನಾ ಪ್ರಬಂಧಗಳು. ಇವರು ಸಾಹಿತಿ ಉತ್ತಂಗಿ ಚೆನ್ನಪ್ಪ ಅವರ ಮಗ.


👉。ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು 127 ಸಾಧಕರಿಗೆ ನೀಡಲಾಗಿದೆ. ಪದ್ಮ ಪ್ರಶಸ್ತಿಗಳಲ್ಲಿ 101 ಪದ್ಮ ಪ್ರಶಸ್ತಿ, 24  ಪದ್ಮಭೂಷಣ ಮತ್ತು ಎರಡು ಪದ್ಮವಿಭೂಷಣ ಪ್ರಶಸ್ತಿಗಳು ಸೇರಿವೆ. ಪ್ರಸೂತಿ ತಜ್ಞೆ ಕಾಮಿನಿ ರಾವ್‌, ಯೋಗ ಗುರು ಬಿ.ಕೆ.ಎಸ್‌ ಅಯ್ಯಂಗಾರ್‌ ಅವರು ಸೇರಿದಂತೆ ರಾಜ್ಯದ ಏಳು ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.


👉。ಜನವರಿಯಲ್ಲಿ ನಡೆದ ‘2014ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಚೀನಾದ ಲೀ ನಾ (ಮಹಿಳೆಯರ), ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ್‌ (ಪುರುಷರ) ಸಿಂಗಲ್ಸ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಲೀ ನಾ 16.69 ಕೋಟಿ ರೂಪಾಯಿ ಮತ್ತು ವಾವ್ರಿಂಕಾ 14.57 ಕೋಟಿ ರೂಪಾಯಿ ಬಹುಮಾನ ಗೆದ್ದರು. ಇದೇ ಟೂರ್ನಿಯ ಮಿಶ್ರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರುಮೇನಿಯಾದ ಹೊರಿಯ ಟಿಕಾವ್‌ ಅವರು ಪರಾಭವಗೊಂಡರು.


👉。ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಭಾರತದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಎಂಟು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು. 2013ರ ಡಿಸೆಂಬರ್‌ ತಿಂಗಳಲ್ಲಿ ಜಪಾನ್‌ ರಾಜ ಅಕಿ ಹಿಟೊ ಅವರು ಭಾರತಕ್ಕೆ ಭೇಟಿ ನೀಡಿದ್ದರು.


👉。ಯಾವುದೇ ಕಾರಣಗಳಿಲ್ಲದೆ ರಾಷ್ಟ್ರಪತಿ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥ ಪಡಿಸಲು ವಿಳಂಬ ಮಾಡಿದರೆ ಅಂತಹ ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು ಎಂದು ಸುಪ್ರೀಂ ಕೋರ್ಟ್‌ ಜನವರಿ 21ರಂದು ಮಹತ್ವದ ತೀರ್ಪು ಪ್ರಕಟಿಸಿತು.


👉。ರಾಜ್ಯ ಸರ್ಕಾರ ಜನವರಿ 22ರಂದು ‘ಕನ್ನಡ ಯೂನಿಕೋಡ್‌’ ಅನ್ನು ಬಿಡುಗಡೆ ಮಾಡಿತು. ಇದನ್ನು ಹಾಸನದ ಮಾರುತಿ ತಂತ್ರಾಂಶ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದರಲ್ಲಿ 12 ಬಗೆಯ ಅಕ್ಷರ ವಿನ್ಯಾಸಗಳು, 12 ಪರಿವರ್ತಕಗಳು ಸೇರಿದಂತೆ ಮೊಬೈಲ್‌ ಮತ್ತು ಬ್ರೈಲ್‌ ಲಿಪಿ ಅಪ್ಲಿಕೇಶಗಳು ಸೇರಿವೆ.


👉。ರಾಜ್ಯ ಸರ್ಕಾರ ಜನವರಿಯಲ್ಲಿ ‘ಜ್ಯೋತಿ ಸಂಜೀವಿನಿ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿತು. ಈ ಆರೋಗ್ಯ ಯೋಜನೆಯನ್ನು ಸರ್ಕಾರಿ ನೌಕರರು ಮಾತ್ರ ಪಡೆಯಬಹುದು. ಇದರ ಅನ್ವಯ ನೌಕರರ ಅಥವಾ ಅವರ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.


👉。ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಅರುಣಾ ಬಹುಗುಣ ನೇಮಕ­ಗೊಂಡಿದ್ದಾರೆ. ಇವರು ಆಂಧ್ರ ಪ್ರದೇಶದ 1979ರ ಐಪಿಎಸ್‌  ಬ್ಯಾಚ್‌ನ  ಅಧಿಕಾರಿ.

(ಕೃಪೆ: ಪ್ರಜಾವಾಣಿ)

No comments:

Post a Comment