"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 13 January 2017

☀️ ಭಾಗ - VII: 2016 ರ ಕರ್ನಾಟಕದ (ಸ್ಥಳೀಯ) ಪ್ರಮುಖ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - VII: 2016 ರ ಕರ್ನಾಟಕದ (ಸ್ಥಳೀಯ) ಪ್ರಮುಖ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.



•► ಕರ್ನಾಟಕ ರಾಜಕೀಯ -ಆಡಳಿತ ರಂಗ

 ಈ ವರ್ಷ ರಾಜ್ಯದ ಪಾಲಿಗೆ ಸಿಹಿಗಿಂತ ಕಹಿಯನ್ನೆ ಹೆಚ್ಚು ಕೊಟ್ಟಿತೆನ್ನಬೇಕು. ಮಹದಾಯಿ ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಜತೆಗೆ ಹಲವು ವಿವಾದಗಳು ಕಾಡಿದವು. ಮೂರೂ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ, ಭಿನ್ನಮತ ಕಂಡುಬಂತು. ಸಚಿವ ಮೇಟಿ ಅವರ ಲೈಂಗಿಕ ಪ್ರಕರಣದ ಸಿ.ಡಿ. ಬಿಡುಗಡೆ ವರ್ಷಾಂತ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಇವುಗಳ ನಡುವೆಯೂ ರಾಜ್ಯಕ್ಕೆ ಸಂದ ಕೆಲ ಪ್ರಶಸ್ತಿಗಳು, ಸರ್ಕಾರ ಕೈಗೊಂಡ ಕೆಲ ಯೋಜನೆಗಳು, ರಾಯಚೂರಿಗೆ ಐಐಐಟಿ ಮಂಜೂರಾಗಿದ್ದು ಸ್ವಲ್ಪ ನೆಮ್ಮದಿ ತಂದವು.


•►  ಅಬ್ಬಾ, ಎಂಥ ಮದುವೆ!

ಈ ವರ್ಷ ಎರಡು ಮದುವೆಗಳು ನಾಡಿನ ಗಮನ ಸೆಳೆದವು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೃಹಸ್ಥಾಶ್ರಮ ಪ್ರವೇಶಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿಯ ವಿವಾಹ ಕೋಟ್ಯಂತರ ರೂ.ಗಳ ಖರ್ಚಿನಿಂದಾಗಿ ಗಮನ ಸೆಳೆಯುವುದರ ಜತೆಗೆ ಚರ್ಚೆಗೂ ಗ್ರಾಸವಾಯಿತು. ರೆಡ್ಡಿ ಮಗಳ ಮದುವೆ ಸಂಬಂಧ ತೆರಿಗೆ ಇಲಾಖೆ ನೋಟಿಸನ್ನೂ ರವಾನಿಸಿದೆ.


•►  ಪಕ್ಷ ಪ್ರವರ

*.ಬಿಜೆಪಿ:
ಯುಗಾದಿ ಹಬ್ಬದ ದಿನವೇ ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷರಾಗಿ ನೇಮಕವಾಗುವುದರೊಂದಿಗೆ ಪಕ್ಷಕ್ಕೆ ಹೊಸ ಉತ್ಸಾಹ ಬಂದಿದ್ದು ಸುಳ್ಳಲ್ಲ. ತಮ್ಮ ವಿರುದ್ಧದ ಆರೋಪಗಳಿಂದ ಖುಲಾಸೆಯಾಗಿದ್ದು ಅವರ ಶಕ್ತಿಯನ್ನು ಹೆಚ್ಚಿಸಿತು. ಆದರೆ ಪದಾಧಿಕಾರಿಗಳ ಆಯ್ಕೆಯಲ್ಲಿ ಆದ ಅಸಮಾಧಾನ ಇನ್ನೂ ತಣಿದಿಲ್ಲ. ವಿಧಾನಪರಿಷತ್​ನಲ್ಲಿ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ಪರ್ಯಾಯವಾಗಿ ಸಂಘಟನೆ ಮಾಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮೂಲಕ ಎಚ್ಚರಿಕೆ ಕೊಡಿಸಿದ್ದರೂ ಪ್ರಯೋಜನವಾಗಿಲ್ಲ.


*.ಜೆಡಿಎಸ್:
ವರ್ಷದ ಆರಂಭದಿಂದಲೂ ಭಿನ್ನಮತೀಯ ಶಾಸಕರು ಪಕ್ಷದ ಮುಖಂಡರಿಗೆ ತಲೆಬಿಸಿ ತಂದರು. ರಾಜ್ಯಸಭೆ ಚುನಾವಣೆಯಲ್ಲಿ ಎಂಟು ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಪಕ್ಷದ ಅಭ್ಯರ್ಥಿ ಫಾರೂಕ್ ಅವರನ್ನು ಸೋಲಿಸಿದರು. ಆ ನಂತರ ಆ ಶಾಸಕರನ್ನು ಅಮಾನತು ಮಾಡಲಾಯಿತು. ಬೆಂಗಳೂರಿನ ಗೋಪಾಲಯ್ಯ ಮಾತ್ರ ಮತ್ತೆ ಪಕ್ಷದತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಇದರ ನಡುವೆ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಎಚ್.ಡಿ. ಕುಮಾರಸ್ವಾಮಿ ಪುನರಾಯ್ಕೆಯಾಗಿದ್ದಾರೆ. ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ಸಂಘಟನೆಗೆ ಒತ್ತು ನೀಡಲೆಂದು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ.

ಕೆಲ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತಕ್ಕಾಗಿ ಕಾಸು ಕೇಳಿದರೆಂಬ ಆರೋಪ ಖಾಸಗಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಕೇಳಿಬಂದು, ಜೆಡಿಎಸ್ ಶಾಸಕ ಖೂಬಾ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.

*.ಕಾಂಗ್ರೆಸ್:
ಕುತೂಹಲದ ಮೊಟ್ಟೆಯಾಗಿದ್ದ ಸಂಪುಟ ಪುನಾರಚನೆ ಅಂತೂ ಈ ವರ್ಷದ ಮಧ್ಯದಲ್ಲಿ ನಡೆಯಿತು. 14 ಮಂತ್ರಿಗಳನ್ನು ಕೈಬಿಟ್ಟು ಅಷ್ಟೇ ಸಂಖ್ಯೆಯ ಸಚಿವರನ್ನು ಸೇರಿಸಿಕೊಳ್ಳಲಾಯಿತು. ಆ ಮೂಲಕ ಸಿದ್ದರಾಮಯ್ಯ ತಮ್ಮ ಕೈಬಲಪಡಿಸಿಕೊಂಡರು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಯತ್ನಿಸಿದರೂ ಮತ್ತೆ ಮತ್ತೆ ವಿವಾದಗಳಿಗೆ ತಲೆಕೊಡಬೇಕಾಯಿತು.


•► ನಿಗಮ ಮತ್ತು ಮಂಡಳಿಗಳಿಗೆ ಎರಡನೇ ಅವಧಿಗೆ ನೇಮಕಾತಿಯಾಗಿದೆ. ಇದರಲ್ಲಿ 21 ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಸಂಪುಟ ಪುನಾರಚನೆಯಲ್ಲಿ ಆಗಿದ್ದ ಅಸಮಾಧಾನ ಸ್ವಲ್ಪ ತಗ್ಗಿದೆ. ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಕೈಬಿಟ್ಟ ಶ್ರೀನಿವಾಸಪ್ರಸಾದ್, ಅಂಬರೀಷ್, ಬಾಬುರಾವ್ ಚಿಂಚನಸೂರು, ಖಮರುಲ್ ಇಸ್ಲಾಂ, ಸಂಪುಟದಲ್ಲಿ ಸ್ಥಾನ ಸಿಗದ ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಕೆಲ ದಿನ ಅತೃಪ್ತಿ ಹೊರ ಹಾಕಿದರು. ಶ್ರೀನಿವಾಸಪ್ರಸಾದ್ ಮಾತ್ರ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಮಂತ್ರಿಯಾಗುವ ಆಸೆ ಹೊಂದಿದ್ದ ಕಾಗೋಡು ತಿಮ್ಮಪ್ಪ, ರಮೇಶ್​ಕುಮಾರ್, ರಾಯರೆಡ್ಡಿ ಕೊನೆಗೂ ಸಂಪುಟ ಸೇರಿದರು. ಮಲ್ಲಿಕಾರ್ಜುನ ಖರ್ಗೆ ಅವರ ದನಿಯಡಗಿಸುವ ಸಲುವಾಗಿಯೇ ಅವರ ಪುತ್ರ ಪ್ರಿಯಾಂಕ ಖರ್ಗೆಯನ್ನು ಮಂತ್ರಿ ಮಾಡಿದ್ದು ಸಿದ್ದರಾಮಯ್ಯನವರ ಚಾಣಾಕ್ಷತನಕ್ಕೆ ಸಾಕ್ಷಿ. ಏತನ್ಮಧ್ಯೆ, ದಿನೇಶ್ ಗುಂಡೂರಾವ್ ಪಕ್ಷದ ಕಾರ್ಯಾಧ್ಯಕ್ಷರಾದರು. ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರರಲ್ಲಿ ಕೇವಲ ಒಂದು ಸ್ಥಾನ ಗೆದ್ದರೂ, ರಾಜ್ಯಸಭೆಯಲ್ಲಿ ನಾಲ್ಕಕ್ಕೆ ಮೂರು, ವಿಧಾನಪರಿಷತ್​ನಲ್ಲಿ 7ರಲ್ಲಿ 4 ಸ್ಥಾನ ಜಯಿಸುವ ಮೂಲಕ ಸ್ವಲ್ಪ ನಿರಾಳವಾಯಿತು. ಜೆಡಿಎಸ್ ಶಾಸಕರನ್ನು ಸೆಳೆಯುವ ತಂತ್ರ ಅನುಸರಿಸಿದ್ದು ಫಲಪ್ರದವಾಯಿತು. ಜಿಲ್ಲಾ ಪಂಚಾಯಿತಿಗಳಲ್ಲಿ ಸಹ ಹೆಚ್ಚು ಸ್ಥಾನಗಳನ್ನು ಗಳಿಸಿ ಮೊದಲ ಸ್ಥಾನ ಉಳಿಸಿಕೊಂಡಿತು. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಮುಂದುವರಿಸಿ ಪದ್ಮಾವತಿ ಅವರನ್ನು ಮೇಯರ್ ಮಾಡಲಾಯಿತು.


•►  ರಮ್ಯಾ ಪಾಕ್ ಹೇಳಿಕೆ

ಪಾಕಿಸ್ತಾನಕ್ಕೆ ಹೋಗಿ ಬಂದ ನಟಿ, ಮಾಜಿ ಸಂಸದೆ ರಮ್ಯಾ ‘ಅಲ್ಲಿರುವವರೆಲ್ಲ ಕೆಟ್ಟವರೇನೂ ಅಲ್ಲ, ಅಲ್ಲಿಯೂ ಒಳ್ಳೆಯವರಿದ್ದಾರೆ’ ಎಂದಿದ್ದು ವಿವಾದ ಸೃಷ್ಟಿಸಿತ್ತು. ರಮ್ಯಾ ದೇಶದ ವಿರೋಧಿ ರಾಷ್ಟ್ರವನ್ನು ಹೊಗಳುತ್ತಿದ್ದಾರೆಂಬ ಟೀಕೆಗಳು ಕೇಳಿಬಂದು, ರಾಷ್ಟ್ರದ್ರೋಹ ಕಾನೂನಿನಡಿ ಪ್ರಕರಣವೂ ದಾಖಲಾಯಿತು.



•► ವಿವಾದ-ವಿಚಾರ

*.ಲೋಕಾಯುಕ್ತ ನೇಮಕ:
ಲೋಕಾಯುಕ್ತಕ್ಕೆ ನ್ಯಾಯಮೂರ್ತಿಯ ನೇಮಕ ಕುರಿತ ವಿವಾದ ಮುಂದುವರಿದಿದೆ. ಆಯ್ಕೆ ಸಮಿತಿಯಲ್ಲಿ ಸರ್ಕಾರ ನ್ಯಾ.ಎಸ್.ಆರ್. ನಾಯಕ್ ಹೆಸರು ಹೇಳಿದರೆ, ಪ್ರತಿಪಕ್ಷ ಮುಖಂಡರು ನ್ಯಾ. ವಿಕ್ರಮಜಿತ್ ಸೇನ್ ಹೆಸರನ್ನು ಮುಂದೆ ತಂದರು. ಸರ್ಕಾರ ನಾಯಕ್ ಹೆಸರನ್ನೇ ಶಿಫಾರಸು ಮಾಡಿತಾದರೂ ರಾಜ್ಯಪಾಲರು ಒಪ್ಪದೇ ಪ್ರಸ್ತಾಪ ನನೆಗುದಿಗೆ ಬಿತ್ತು.

*.ನ್ಯಾ. ಆಡಿ ಪ್ರಕರಣ:
ಲೋಕಾಯುಕ್ತರಾಗಿದ್ದ ನ್ಯಾ. ವೈ. ಭಾಸ್ಕರ ರಾವ್ ಅವರ ಪದಚ್ಯುತಿಗೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡ ರೀತಿಯಲ್ಲಿಯೇ, ಉಪ ಲೋಕಾಯುಕ್ತ ನ್ಯಾ. ಬಿ. ಸುಭಾಷ್ ಅಡಿ ಅವರ ವಿರುದ್ಧವೂ ನಿರ್ಣಯ ಕೈಗೊಳ್ಳಲು ಸರ್ಕಾರ ಮುಂದಾಗಿತ್ತು. ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ನಂತರ ಸಭಾಧ್ಯಕ್ಷರು ಪ್ರಕರಣ ಕೈಬಿಟ್ಟರು. ಈ ಇಡೀ ಪ್ರಕರಣದಲ್ಲಿ ಸರ್ಕಾರ ಮುಖಭಂಗ ಅನುಭವಿಸಿತು.

*.ಎಸಿಬಿ ರಚನೆ-
ಆಂಟಿ ಕರಪ್ಶನ್ ಬ್ಯೂರೋ(ಭ್ರಷ್ಟಾಚಾರ ನಿಗ್ರಹ ದಳ)ವನ್ನು ಸರ್ಕಾರ ಜೂನ್​ನಲ್ಲಿ ರಚಿಸಿದ್ದು, ಇದು ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆ. ಇದು ನೇರವಾಗಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿರುವ ಕಾರಣ ಇದರ ಕೆಲಸ ಕಾರ್ಯಗಳು ಜನರಲ್ಲಿ ಇನ್ನೂ ವಿಶ್ವಾಸ ಹುಟ್ಟಿಸಿಲ್ಲ.


•►  ಗವರ್ನರ್ v/s ಗವರ್ನಮೆಂಟ್

ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟ ಮುಂದುವರಿಯಿತು. ಕೆಪಿಎಸ್​ಸಿಗೆ ಟಿ. ಶ್ಯಾಂ ಭಟ್ ಅವರ ನೇಮಕ ಶಿಫಾರಸನ್ನು ಎರಡು ಬಾರಿ ತಿರಸ್ಕರಿಸಿದ್ದ ರಾಜ್ಯಪಾಲರು ಮೂರನೇ ಬಾರಿ ಒಪ್ಪಿ ಅಚ್ಚರಿ ಮೂಡಿಸಿದರು. ಲೋಕಾಯುಕ್ತಕ್ಕೆ ನ್ಯಾ. ಎಸ್.ಆರ್. ನಾಯಕ್ ಅವರನ್ನು ನೇಮಿಸುವ ಸರ್ಕಾರದ ಉದ್ದೇಶಕ್ಕೆ ರಾಜ್ಯಪಾಲರು ಅಸ್ತು ಎನ್ನಲಿಲ್ಲ. ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನೂ ಒಪ್ಪಲಿಲ್ಲ. ಪಂಚಾಯಿತಿ ಸಮಗ್ರ ತಿದ್ದುಪಡಿ ವಿಧೇಯಕಕ್ಕೆ ಆರಂಭದಲ್ಲಿ ಅಸಮ್ಮತಿಸಿದ್ದರಾದರೂ ಸರ್ಕಾರ ವಿವರಿಸಿದ ನಂತರ ಒಪ್ಪಿದರು. ಅರ್ಕಾವತಿ ರೀಡೂ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನಕಾರ ಸೂಚಿಸಿದ್ದು ವಿಶೇಷ.



 •► ಆಡಳಿತ ಲೋಪ-ದೋಷ

•►  ಗ್ರಾಮೀಣಾಭಿವೃದ್ಧಿಯಲ್ಲಿ ಕಳ್ಳಗಂಟು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಈ ವರ್ಷ ಸಾಕಷ್ಟು ಸದ್ದು ಮಾಡಿತು. ಇಲಾಖೆಯ ಹಣವನ್ನು ಬಳಸದೇ ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರೇ ಪತ್ತೆ ಹಚ್ಚಿ 745 ಕೋಟಿ ರೂ.ಗಳನ್ನು ವಾಪಾಸು ಇಲಾಖೆಗೆ ತಂದರು. ಅದೇ ರೀತಿ ಬೇರೆ ಬೇರೆ ಇಲಾಖೆಯಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಕಳ್ಳಗಂಟು ಇರಬಹುದೆಂಬ ಅಂದಾಜಿದೆ.


•► ಮುಖ್ಯಮಂತ್ರಿ ಪರಿಹಾರ ನಿಧಿಗೆ ಕನ್ನ

ಬಡವರ ಆರೋಗ್ಯಕ್ಕೆ ನೆರವಾಗುವ ಉದ್ದೇಶದಿಂದ ಇರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಕಲಿ ಬಿಲ್ ಮೂಲಕ ಕೆಲವರು ಕನ್ನ ಹಾಕಲು ಮುಂದಾಗಿರುವುದು ಬಯಲಿಗೆ ಬಂತು. ಆ ಬಗ್ಗೆ 75 ಮೊಕದ್ದಮೆಗಳು ದಾಖಲಾಗಿದ್ದು ಸಿಐಡಿ ತನಿಖೆ ನಡೆಯುತ್ತಿದೆ.


•► ಸರ್ಕಾರ ಫೇಲ್!

ಪಿಯುಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಸರ್ಕಾರವೇ ಫೇಲ್ ಆಯಿತು. ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಎರಡು ಬಾರಿ ಲೀಕ್ ಆಯಿತು. ಸಿಐಡಿ ಹಗರಣದ ಪ್ರಮುಖ ಕಿಂಗ್​ಪಿನ್​ಗಳನ್ನು ಬಂಧಿಸಿ ತನಿಖೆ ನಡೆಸುತ್ತಿದೆ.

ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಅವ್ಯವಹಾರದ ಆರೋಪ, ಅಬಕಾರಿ ಸಚಿವರಾಗಿದ್ದ ಎಚ್.ವೈ.ಮೇಟಿ ಲೈಂಗಿಕ ಪ್ರಕರಣದ ಸಿ.ಡಿ. ಕಾಂಗ್ರೆಸ್​ಗೆ ಆತಂಕ-ಮುಜುಗರ ಸೃಷ್ಟಿಸಿದವು.


•►  ವೆಂಕಯ್ಯ ನಿರ್ಗಮನ ನಿರ್ಮಲಾ ಆಗಮನ

ರಾಜ್ಯದಿಂದ ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಎಂ. ವೆಂಕಯ್ಯ ನಾಯ್ಡು ಅವರು ನಾಲ್ಕನೆ ಬಾರಿ ಆಯ್ಕೆ ಬಯಸಿದಾಗ ಅವರ ವಿರುದ್ಧ ಟೀಕೆಗಳು ಕೇಳಿಬಂದವು. ಇದರಿಂದ ಬೇಸರಗೊಂಡ ಅವರು ರಾಜಸ್ಥಾನಕ್ಕೆ ವಲಸೆ ಹೋದರು. ಆದರೆ ವೆಂಕಯ್ಯ ನಾಯ್ಡು ಜಾಗಕ್ಕೆ ತಮಿಳುನಾಡಿನ ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡಲಾಯಿತು.


•► ಚುನಾವಣಾ ವರ್ಷ

ಈ ವರ್ಷ ಸಾಲು ಸಾಲು ಚುನಾವಣೆಗಳನ್ನು ರಾಜ್ಯ ನೋಡಿತು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್, ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಇಷ್ಟಾಗ್ಯೂ ವಿಧಾನಸಭೆ ಹಾಗೂ ವಿಧಾನಪರಿಷತ್​ನ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇದೆ.


•► ಜಾಧವ್​ಗೆ ಬಿಸಿ

ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ ಜಾಧವ್ ಸಂಸದೀಯ ಸಮಿತಿ ಸಭೆಗೆ ಹೋಗಿರಲಿಲ್ಲ. ಆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ತರಾಟೆ ತೆಗೆದುಕೊಂಡಿದ್ದರು. ಮಾಧ್ಯಮಗಳು ಪ್ರಶ್ನಿಸಲು ಹೋದಾಗ ಜಾಧವ್ ಅವರು ವಿಧಾನಸೌಧದ ಎರಡು ಮಹಡಿಗಳಲ್ಲಿ ಓಡಿ ಹೋಗಿ ಕೋಣೆಯೊಂದರಲ್ಲಿ ಬಾಗಿಲು ಹಾಕಿಕೊಂಡಿದ್ದರು.
ಅಧಿಕಾರದ ಕೊನೆ ಅವಧಿಯಲ್ಲಿ ಅರವಿಂದ ಜಾಧವರನ್ನು ಭೂಹಗರಣದ ಆಪಾದನೆಯೂ ಕಾಡಿತು. ಕೊನೆಗೆ ಸರ್ಕಾರದ ವರದಿ ಅವರ ಪರವಾಗಿ ಬಂದು ನಿರಾಳರಾದರು.

*.ಕುರುಡು ಕಾಂಚಾಣ!

ವಿಧಾನಸೌಧ ಆವರಣದಲ್ಲಿಯೇ ವಕೀಲರೊಬ್ಬರ ಕಾರಿನಲ್ಲಿ 1.9 ಕೋಟಿ ರೂ. ಸಿಕ್ಕ ಪ್ರಕರಣದಲ್ಲಿ ಆ ಹಣ ಯಾರದ್ದು, ಯಾರಿಗೆ ಕೊಡಲಾಗುತ್ತಿತ್ತು ಎಂಬುದು ಮಾತ್ರ ಬಹಿರಂಗವಾಗಲೇ ಇಲ್ಲ. ಅಧಿಕಾರಿಗಳಾದ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಅವರ ಮನೆಯಲ್ಲಿ ಅಕ್ರಮ ಆಸ್ತಿ ಪತ್ತೆ ಹಾಗೂ ರಾಜ್ಯದ ಕೆಲವೆಡೆ ಹೊಸ ನೋಟುಗಳು ಸಿಕ್ಕಿದ್ದು ಕಪ್ಪುಚುಕ್ಕೆಯೇ.

(courtesy :ವಿಜಯವಾಣಿ ಸುದ್ದಿಜಾಲ)

No comments:

Post a Comment