"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 21 January 2019

●.ಪೌರತ್ವ ತಿದ್ದುಪಡಿ ಮಸೂದೆ - 2016 / ಪೌರತ್ವ ವಿಧೇಯಕ / ಭಾರತೀಯ ಪೌರತ್ವ ಕಾಯಿದೆ / The Citizenship (Amendment) Bill, 2016 / india citizenship / Citizenship

●.ಪೌರತ್ವ ತಿದ್ದುಪಡಿ ಮಸೂದೆ - 2016 / ಪೌರತ್ವ ವಿಧೇಯಕ / ಭಾರತೀಯ ಪೌರತ್ವ ಕಾಯಿದೆ /
The Citizenship (Amendment) Bill, 2016 /  india citizenship /  Citizenship bill / Citizenship Amendment Bill - (IAS prelims 2019 preparation)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ ಪ್ರಿಲಿಮ್ಸ್ 2019 ರ ತಯಾರಿ
 (IAS Prelims 2019)

— ಸುದ್ದಿಯಲ್ಲಿ ಈ ವಿಷಯ ಬಂದಿರೋದ್ರಿಂದ - ಪೌರತ್ವ ಕುರಿತು ಸಂವಿಧಾನದಲ್ಲಿ ವಿವರಿಸಲಾದ ವಿಧಿ-ವಿಧಾನಗಳನ್ನು ನಾವು ಅವಲೋಕಿಸಬೇಕು. ಅದರೊಂದಿಗೆ ಸಂವಿಧಾನ ತಿದ್ದುಪಡಿ ವಿಧಾನ, ಸಂಸತ್ತಿನ ಪ್ರಕ್ರಿಯೆ ಕುರಿತು ನಾವು ತಿಳಿದುಕೊಳ್ಳಬೇಕು.



• ಏನಿದು ಪೌರತ್ವ ವಿಧೇಯಕ?

ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ಪೌರತ್ವ ವಿಧೇಯಕವನ್ನು 2016ರಲ್ಲಿ ಪ್ರಸ್ತಾಪಿಸಲಾಯಿತು. ಇದರ ಮೂಲಕ 'ಅಕ್ರಮ ವಲಸಿಗ'ರ ವ್ಯಾಖ್ಯಾನವನ್ನು ಬದಲಾಯಿಸಲು ಸರಕಾರ ಪ್ರಯತ್ನಿಸುತ್ತಿದೆ.

ಸೂಕ್ತ ಪಾಸ್‌ಪೋರ್ಟ್‌ ಮತ್ತು ವೀಸಾ ಇಲ್ಲದೆ ಅಥವಾ ನಕಲಿ ದಾಖಲೆ ಹೊಂದಿ ದೇಶ ಪ್ರವೇಶಿಸಿದ, ಅಥವಾ ವೀಸಾ ಅವಧಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿದವರನ್ನು ಅಕ್ರಮ ವಲಸಿಗ
ಎಂದು ಪರಿಗಣಿಸಲಾಗುತ್ತದೆ. ಹೊಸ ಕಾಯಿದೆ ಜಾರಿಯಾದರೆ, 2014ರ ಡಿ.31ರ ಒಳಗೆ ಅಫಘಾನಿಸ್ತಾನ, ಬಾಂಗ್ಲಾ ಮತ್ತು ಪಾಕಿಸ್ತಾನಗಳಿಂದ ಆಗಮಿಸಿ ಇಲ್ಲಿ ನೆಲೆಸಿರುವ ಹಿಂದೂ, ಬೌದ್ಧ, ಜೈನ, ಸಿಖ್‌, ಪಾರ್ಸಿ ಅಥವಾ ಕ್ರೈಸ್ತ. (ಗಮನಿಸಿ- ಇಲ್ಲಿ ಮುಸ್ಲಿಂ ಮತದವರನ್ನು ಹೊರತುಪಡಿಸಿ) ಮತದವರು ಭಾರತೀಯ ಪೌರರೆನಿಸುತ್ತಾರೆ.

ಈ ತನಕ 12 ವರ್ಷಗಳಿಂದ ದೇಶದಲ್ಲಿ ನೆಲೆಸಿದ ವಿದೇಶಿಗರಿಗೆ ಪೌರತ್ವ ಪ್ರಾಪ್ತಿ ಆಗುತ್ತಿತ್ತು. ಹೊಸ ಕಾಯಿದೆ ಜಾರಿಯಾದರೆ ಅದು 6 ವರ್ಷಕ್ಕಿಳಿಯಲಿದೆ. 2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ, ಅಕ್ಕಪಕ್ಕದ ದೇಶಗಳಿಂದ ಸಂತ್ರಸ್ತರಾಗಿ ದೇಶದೊಳಗೆ ಪ್ರವೇಶಿಸಿದ ಹಿಂದೂಗಳಿಗೆ ಪೌರತ್ವ ನೀಡುವುದಾಗಿ ಬಿಜೆಪಿ ವಾಗ್ದಾನ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಕಾನೂನು ರೂಪಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.


• ವಿರೋಧ ಯಾಕೆ?

ಮುಖ್ಯವಾಗಿ, ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿರುವುದು ಅಸ್ಸಾಂನಲ್ಲಿ. ಪಕ್ಕದ ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಅಸ್ಸಾಂನಲ್ಲಿ ಬೀಡು ಬಿಟ್ಟಿದ್ದಾರೆ. ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮುಂತಾದ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ಹಾಗೂ ಕ್ರೈಸ್ತಮತೀಯರ ಸಂಖ್ಯೆ ಅಧಿಕವಾಗಿದೆ. ಹೊಸ ಜಾಯಿದೆ ಜಾರಿಗೆ ಬಂದರೆ, ದೊಡ್ಡ ಸಂಖ್ಯೆಯ ವಲಸಿಗ ಹಿಂದೂಗಳು ಇಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಲಿದ್ದಾರೆ.

ಆದರೆ ಈ ರಾಜ್ಯಗಳ ಬುಡಕಟ್ಟು ಸಮುದಾಯ, ಸ್ಥಳೀಯ ಸಮುದಾಯಗಳು ಹೊರಗಿನವರಿಗೆ ಪೌರತ್ವ ಕೊಡುವುದನ್ನು ಇಷ್ಟಪಡುತ್ತಿಲ್ಲ. ವಲಸಿಗರು ಪೌರರಾಗುವುದರಿಂದ ರಾಜ್ಯದ ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯೇ ಮಾಯವಾಗಬಹುದು ಎಂಬುದು ಇವರ ಆತಂಕ. ಈ ವಿಧೇಯಕದ ಜಾರಿಯಿಂದ ಈಶಾನ್ಯ ಭಾರತೀಯರು ಸಂತ್ರಸ್ತರಾಗುತ್ತಾರೆ ಎಂಬುದು ಪ್ರತಿಪಕ್ಷಗಳ ವಾದ.

ಆದರೆ ಹೊಸ ಕಾನೂನು ಇಲ್ಲಿಗಷ್ಟೇ ಸೀಮಿತವಲ್ಲ; ಅದನ್ನು ವಿಶಾಲ ಭಾರತದ ವ್ಯಾಪ್ತಿಯಲ್ಲಿ ನೋಡಬೇಕು, ಈಶಾನ್ಯ ಭಾರತದ ಹಿತವೂ ಇದರಲ್ಲಿದೆ ಎಂದು ಬಿಜೆಪಿ ಹೇಳಿದೆ. ವಿಧೇಯಕದಲ್ಲಿ ಮುಸ್ಲಿಂ ವಲಸಿಗರನ್ನೂ ಸೇರಿಸಬೇಕು; ಮೂರು ದೇಶಗಳಿಗೆ ಸೀಮಿತಗೊಳಿಸಬಾರದು ಎಂಬುದು ಪ್ರತಿಪಕ್ಷಗಳ ಹಠ.


• ಮುಸ್ಲಿಮರು ಯಾಕಿಲ್ಲ?

ವಿಧೇಯಕದಲ್ಲಿ ಮುಸ್ಲಿಂ ವಲಸಿಗರ ಪ್ರಸ್ತಾಪವಿಲ್ಲ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದ ರೋಹಿಂಗ್ಯಾ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಭಾರತ ಸೇರಿದ್ದಾರೆ. ಆದರೆ ಈ ಕಾಯಿದೆಯ ಮೂಲಭೂತ ಉದ್ದೇಶ, ಭಾರತವೇ ಮೂಲ ಮಾತೃಭೂಮಿಯಾಗಿದ್ದು, ಇಂದು ಸಂತ್ರಸ್ತರಾದವರಿಗೆ ನೆಲೆ ಒದಗಿಸುವುದು. ಹಿಂದೂ, ಬೌದ್ಧ, ಜೈನ ಮುಂತಾದ ವಲಸಿಗರಿಗೆ ಭಾರತ ಹೊರತುಪಡಿಸಿ ಹೋಗಲು ಬೇರೆ ದೇಶಗಳೇ ಇಲ್ಲ ಎಂಬುದನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ವಿಧೇಯಕದಲ್ಲಿ ಕ್ರೈಸ್ತ ವಲಸಿಗರ ಪ್ರಸ್ತಾಪವಿದೆ; ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಸಾಕಷ್ಟು ಸಂಖ್ಯೆಯ ಕ್ರಿಶ್ಚಿಯನ್ನರಿದ್ದರು. ಬಾಂಗ್ಲಾ ಹಾಗೂ ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರಾಗಿ ಬಂದ ಮುಸ್ಲಿಮರಲ್ಲಿ ಅನೇಕರು ದೇಶದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂಬುದನ್ನೂ ಇಲ್ಲಿ ಗಮನಿಸಬೇಕು.


• ಯಾರು ಪೌರರು?

1950ರ ಜ.26ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದವರು; ತಂದೆತಾಯಿಗಳಿಬ್ಬರೂ ಭಾರತದ ಪೌರರಾಗಿದ್ದು 2004ರ ಡಿ.3ರ ಮೊದಲು ಜನಿಸಿದವರು; 1950 ಜ.26ರಿಂದ 1992 ಡಿ.10ರ ನಡುವೆ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆ ಭಾರತದ ಪೌರನಾಗಿದ್ದರೆ; 1992ರ ಡಿ.10ರ ನಂತರ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆತಾಯಿಗಳಿಬ್ಬರೂ ಭಾರತೀಯ ಪೌರರಾಗಿದ್ದರೆ- ಅಂಥವರು ಭಾರತೀಯರಾಗಿರುತ್ತಾರೆ. 2004ರ ಡಿ.3ರ ಬಳಿಕ, ಭಾರತೀಯ ತಂದೆತಾಯಿಗೆ ವಿದೇಶದಲ್ಲಿ ಜನಿಸಿದ್ದರೂ, ಒಂದು ವರ್ಷದೊಳಗೆ ದೂತಾವಾಸದ ಮುಖೇನ ಜನನ ನೋಂದಣಿ ಆಗಿರಬೇಕು. ಇದಲ್ಲದೆ 1955ರ ಪೌರತ್ವ ಕಾಯಿದೆಯಲ್ಲಿ ತಿಳಿಸಿರುವಂತೆ ಭಾರತೀಯ ಮೂಲದವನಾಗಿದ್ದು ಭಾರತದಲ್ಲಿ 7 ವರ್ಷಗಳಿಂದ ನೆಲೆಸಿದ್ದರೆ; ಅವಿಭಜಿತ ಭಾರತದವನಾಗಿದ್ದು ಇತರೆಡೆ ನೆಲೆಸಿದ್ದರೆ; ಭಾರತೀಯ ವ್ಯಕ್ತಿಯನ್ನು ಮದುವೆಯಾಗಿ ಏಳು ವರ್ಷಗಳಿಂದ ಇಲ್ಲಿ ನೆಲೆಸಿದ್ದರೆ; ಈಗಾಗಲೇ ಭಾರತೀಯ ಪೌರತ್ವ ಪಡೆದಿರುವ ಪೋಷಕರ ಮಕ್ಕಳಾಗಿದ್ದರೆ- ಅಂಥವರು ಅರ್ಜಿ ಸಲ್ಲಿಸಿ ಪೌರತ್ವ ಪಡೆಯಬಹುದು. 


• ಎನ್‌ಆರ್‌ಸಿ ಮತ್ತು ಪೌರತ್ವ

ಮುಖ್ಯವಾಗಿ, ಈ ಕಾಯಿದೆಯ ದೊಡ್ಡ ಪರಿಣಾಮ ಕಾಣಿಸಲಿರುವುದು ಅಸ್ಸಾಂನಲ್ಲಿ. ಪ್ರಸ್ತುತ ಇಲ್ಲಿ ಅಸ್ಸಾಂ ಒಪ್ಪಂದ-1985 ಜಾರಿಯಲ್ಲಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆಯುತ್ತಿದೆ. ಅದರ ಪ್ರಕಾರ, 1971ರ ಮಾರ್ಚ್‌ವರೆಗೆ ವಲಸಿಗರಾಗಿ ಇಲ್ಲಿಗೆ ಆಗಮಿಸಿದವರಿಗಷ್ಟೇ ಇಲ್ಲಿನ ಪೌರತ್ವ ಕೊಡಬಹುದು. ಈ ಸಂದರ್ಭದಲ್ಲಿ ಸಾಕಷ್ಟು ಹಿಂದೂಗಳೂ ಮುಸ್ಲಿಮರೂ ಆಗಮಿಸಿದ್ದಾರೆ. ಹೊಸ ಕಾಯಿದೆಯ ಪ್ರಕಾರ, 1971ರ ನಂತರ 2014ರವರೆಗೆ ಬಂದ ಮುಸ್ಲಿಮೇತರರಿಗೆ ಪೌರತ್ವ ಸಿಗಲಿದೆ. ಮುಸ್ಲಿಮರ ಪ್ರಸ್ತಾಪವಿಲ್ಲ. ಇದು ವಲಸಿಗ ಮುಸ್ಲಿಂ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಇವರನ್ನು ಗಡೀಪಾರು ಮಾಡಲು ಈ ಕಾಯಿದೆ ರೂಪಿಸಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ.



• ಪೌರತ್ವ ಹೇಗೆ?

ನಿರ್ದಿಷ್ಟ ಆರು ಧಾರ್ಮಿಕ ಅಲ್ಪಸಂಖ್ಯಾತ ಕೋಮುಗಳ ಅಕ್ರಮ ವಲಸಿಗರು ಶಾಶ್ವತ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಜಿಲ್ಲಾಡಳಿತ ಅವರ ದಾಖಲೆಗಳನ್ನು ಪರಿಶೀಲಿಸಿ, ನಂತರ ರಾಜ್ಯ ಸರಕಾರದ ಸಮ್ಮತಿಗೆ ಕಳಿಸಿಕೊಡಲಾಗುತ್ತದೆ. ಈ ಎರಡೂ ಕಡೆಯಿಂದ ಒಪ್ಪಿಗೆ ಪಡೆದ ವಲಸಿಗರಿಗೆ ಕೇಂದ್ರದಿಂದ ಪೌರತ್ವ ಮಂಜೂರಾಗುತ್ತದೆ.


• ಯಾವ ರಾಜ್ಯಗಳಿಗೆ ಅನ್ವಯ?
ಈ ತಿದ್ದುಪಡಿ ವಿಧೇಯಕ ಕಾನೂನು ಆಗಿ ಪರಿವರ್ತನೆಗೊಂಡರೆ ಎಲ್ಲ ರಾಜ್ಯಗಳು ಇದನ್ನು ಪರಿಪಾಲಿಸಬೇಕಾಗುತ್ತದೆ.
(Courtesy : ವಿಜಯ ಕರ್ನಾಟಕ ದಿನಪತ್ರಿಕೆ)

No comments:

Post a Comment