"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 15 March 2016

●. ಕರ್ನಾಟಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಪ್ರಬಂಧ : (KSP PSI Essay writing Notes) / ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :— ಪಶ್ಷಿಮಘಟ್ಟ ಮತ್ತು ಜೀವವೈವಿಧ್ಯ ರಕ್ಷಣೆ (Western Ghats and Biodiversity Conservation)

 ■. ಪಶ್ಷಿಮಘಟ್ಟ ಮತ್ತು ಜೀವವೈವಿಧ್ಯ ರಕ್ಷಣೆ :
(Western Ghats and Biodiversity Conservation)
━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಕರ್ನಾಟಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಪ್ರಬಂಧ :
(KSP PSI Essay writing Notes)


●.ಪಶ್ಚಿಮಘಟ್ಟ ಏಷ್ಯಾದಲ್ಲೇ ಅತ್ಯಂತ ಪ್ರಶಸ್ತ ಜೀವವೈವಿಧ್ಯ ತಾಣ. ಇದಕ್ಕೆ ಸಹ್ಯಾದ್ರಿ ಪರ್ವತ ಎಂಬ ಹೆಸರೂ ಇದೆ. ಮಹಾರಾಷ್ಟ್ರ- ಗುಜರಾತ್‍ಗಳ ಗಡಿಪ್ರದೇಶದಲ್ಲಿ ತಪತಿ ನದಿಯಿಂದ ಆರಂಭವಾಗಿ ದಕ್ಷಿಣದಲ್ಲಿ ಕನ್ಯಾಕುಮಾರಿ ವರೆಗೂ ಹಬ್ಬಿದೆ. ಒಟ್ಟು 1600 ಕಿಲೋಮೀಟರ್ ಉದ್ದದ ಪರ್ವತಶ್ರೇಣಿ ಐದು ರಾಜ್ಯಗಳಲ್ಲಿ ಹಬ್ಬಿದೆ. ಆದರೆ ಒಟ್ಟುಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲೇ ಇದ್ದು, 60 ಸಾವಿರ ಚದರ ಕಿಲೋಮೀಟರ್ ವ್ಯಾಪಿಸಿದೆ. ಇಲ್ಲಿಂದ ಹುಟ್ಟುವ ನದಿಗಳು ದೇಶದ ಶೇಕಡ 40ರಷ್ಟು ಜಲಾನಯನ ಪ್ರದೇಶವನ್ನು ಆವರಿಸಿದೆ. ವಿಶ್ವದ ಅತ್ಯುನ್ನತ ಜೀವವೈವಿಧ್ಯ ನೆಲೆಯಾಗಿರುವ ಪಶ್ಚಿಮಘಟ್ಟದಲ್ಲಿ 5 ಸಾವಿರ ತಳಿಯ ಗಿಡಮರಗಳಿವೆ. 139 ಬಗೆಯ ಸಸ್ತನಿಗಳು, 508 ವಿಧದ ಪಕ್ಷಿಸಂಕುಲ, 179 ಪ್ರಕಾರದ ದ್ವಿಚರಿಗಳು, 6000ಕ್ಕೂ ವಿವಿಧ ಜಾತಿಯ ಚಿಟ್ಟೆಗಳು, 290ಕ್ಕೂ ಅಧಿಕ ಸಿಹಿ ನೀರಿನ ಮೀನಿನ ತಳಿಗಳು, ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ 325 ತಳಿಗಳು ಈ ಪ್ರದೇಶದಲ್ಲಿವೆ. ಬಂಗಾಳಕೊಲ್ಲಿ ಸೇರುವ ತಾಮ್ರಪರ್ಣಿ, ಗೋದಾವರಿ, ಕೃಷ್ಣಾ, ಕಾವೇರಿ, ಪಶ್ಚಿಮಾಭಿಮುಖವಾಗಿ ಹರಿಯುವ ಮಾಂಡವಿ, ಜವಾರಿ, ಶರಾವತಿ, ನೇತ್ರಾವತಿದಂಥ ನದಿಗಳ ಉಗಮಸ್ಥಾನ. ಹಲವು ಜಲವಿದ್ಯುತ್ ಯೋಜನೆಗಳ ನೆಲೆ. ಆಕರ್ಷಕ ಜಲಪಾತಗಳ ಖಣಿ.

     

●.ದಟ್ಟ ಕಾಡುಗಳಿಂದ ಕೂಡಿದ ದುರ್ಗಮ ಪ್ರದೇಶದಲ್ಲಿ ಮೊದಲು ಕೃಷಿ ಚಟುವಟಿಕೆ ಇರಲಿಲ್ಲ. ಆದರೆ ಬ್ರಿಟಿಷರ ಆಗಮನದ ನಂತರ ವಾಣಿಜ್ಯ ಬೆಳೆಗಳಿಗಾಗಿ ಕಾಡು ಕಡಿದು ಇಡೀ ಪ್ರದೇಶ ಬದಲಾಯಿತು. ಇಂಥ ಭವ್ಯ, ರಮ್ಯ ಸುಂದರ ತಾಣವನ್ನು ಕಾಪಾಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಜನ ಚಳವಳಿಯನ್ನೂ ಕಂಡಿದ್ದೇವೆ. ನಿಸಾರ್ ಅಹ್ಮದ್ ಅವರ ಪಶ್ಚಿಮಘಟ್ಟದ ದಟ್ಟದ ಬೆಟ್ಟದ ಮರಗಳನುಳಿಸಲು ನಡೆನಡೆವಾ…ಎಂಬ ಸಾಲುಗಳು ಹೋರಾಟಕ್ಕೆ ಸ್ಫೂರ್ತಿ ತುಂಬಿದೆ. ಕೇಂದ್ರ ಸರ್ಕಾರವೂ ಇದರ ಸಂರಕ್ಷಣೆಗಾಗಿ 13 ರಾಷ್ಟ್ರೀಯ ಉದ್ಯಾನವನ, 2 ಕಾಯ್ದಿಟ್ಟ ಜೀವಗೋಲ, ರಕ್ಷಿತಾರಣ್ಯ, ವನ್ಯಜೀವಿ ಧಾಮಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ 2012ರ ಜುಲೈ ಒಂದರಂದು ಯುನೆಸ್ಕೊ, ಪಶ್ಚಿಮಘಟ್ಟವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ. ಇಂಥ ಮಹತ್ವದ ಪಶ್ಚಿಮಘಟ್ಟ ಇಂದು ಅಪಾಯದ ಅಂಚಿನಲ್ಲಿದೆ. ಇದರ ರಕ್ಷಣೆ ದೇಶದ ಆದ್ಯತೆಯಾಗಬೇಕು. ಪಶ್ಚಿಮಘಟ್ಟವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡನ್ನು ಒಳಗೊಂಡಿದೆ.


●.ಅಪಾಯ ಏಕೆ?

—ರಾಜ್ಯದ 258 ಕಿರು ಜಲವಿದ್ಯುತ್ ಯೋಜನೆಗಳ ಪೈಕಿ 61 ಪಶ್ಚಿಮಘಟ್ಟದ ಒಡಲಲ್ಲಿವೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಪಶ್ಚಿಮಘಟ್ಟದ ನದಿಗಳಿಗೆ ಅಣೆಕಟ್ಟು ನಿರ್ಮಾಣವಾಗಲಿದೆ. ಇದು ಪಶ್ಚಿಮಘಟ್ಟದ ನಾಶ ಹಾಗೂ ಮನುಕುಲದ ನಾಶಕ್ಕೆ ನಾಂದಿಯಾಗಲಿದೆ. ಅಪರೂಪದ ಪ್ರಾಣಿಪ್ರಬೇಧ, ಪಕ್ಷಿಸಂಕುಲ, ಜಲಚರ, ಸಸ್ಯರಾಶಿ ಪುಸ್ತಕಗಳಿಗಷ್ಟೇ ಸೀಮಿತವಾಗಲಿದೆ ಎನ್ನುವುದು ಹಿರಿಯ ಸಂಶೋಧಕ ಡಾ.ಎನ್.ಎ.ಮಧ್ಯಸ್ಥ ಅವರ ಅಭಿಪ್ರಾಯ. ಪರಿಸರಕ್ಕೂ ಸಾಕಷ್ಟು ಹಾನಿಯಾಗಲಿದ್ದು, ವಿದ್ಯುತ್ ಉತ್ಪಾದನೆ ಯಂತ್ರಗಳ ಸದ್ದು, ನೂರಾರು ಪ್ರಬೇಧಗಳನ್ನು ಬಲಿ ಪಡೆಯಲಿದೆ.

●.ಪಶ್ಚಿಮಘಟ್ಟ ಭಾರತಕ್ಕೆ ನಿಸರ್ಗದತ್ತವಾಗಿ ಬಂದಿರುವ ವರದಾನ. ಅದು ವಿಶ್ವದ ಆಸ್ತಿ. ಈ ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದರ ಉಳಿವಿಗಾಗಿ ಕೇಂದ್ರ ಸರ್ಕಾರ ಮುಂದಾಗಿದ್ದು, ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಕುರಿತ ಎರಡು ತಜ್ಞ ವರದಿಗಳು ಸರ್ಕಾರದ ಮುಂದಿವೆ. ಒಂದು ಕೆಲ ವರ್ಷದ ಹಿಂದೆ ಪರಿಸರ ತಜ್ಞ ಗಾಡ್ಗೀಳ್ ಸಲ್ಲಿಸಿದ ವರದಿ; ಇನ್ನೊಂದು ಕಸ್ತೂರಿರಂಗನ್ ವರದಿ. ಈ ವರದಿಗಳ ಸುತ್ತವೇ ಪಶ್ಚಿಮಘಟ್ಟ ರಕ್ಷಣೆ ಕುರಿತ ಯೋಜನೆಗಳ ಚರ್ಚೆ ಸುತ್ತುತ್ತಿದೆ. ಗಾಡ್ಗೀಳ್ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ, ಸೂಕ್ತ ಆದೇಶ ನೀಡಬೇಕು ಎಂಬ ಮನವಿ ಕೇಂದ್ರ ಹಸಿರು ಪಂಚಾಯ್ತಿಯ ಮುಂದಿದೆ. ಆದರೆ ಇದುವರೆಗೂ ವರದಿ ಪರಿಶೀಲನೆ ನಡೆದಿಲ್ಲ.

●.ಎರಡನೇಯದು ಸರ್ಕಾರವೇ ಪ್ರಕಟಿಸಿರುವ ನಿಯಮಗಳಿಗೆ ಆಧಾರವಾದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ವರದಿ. (15, ಏಪ್ರಿಲ್ 2013) ಸರ್ಕಾರದ ಪ್ರಕಟಣೆಯನ್ನು ಹಲವಾರು ಪರಿಸರವಾದಿ ಸಂಘಟನೆಗಳು ವಿರೋಧಿಸಿದ್ದು, ಇದರ ಜತೆಗೇ ಗಾಡ್ಗೀಳ್  (ಆಗಸ್ಟ್ 13, 2011ರಲ್ಲಿ ಸಲ್ಲಿಕೆ) ವರದಿಯಲ್ಲಿ ಅಡಕವಾಗಿರುವ ಅಂಶಗಳನ್ನೊಳಗೊಂಡ ನಿಯಮಗಳನ್ನೂ ಪ್ರಕಟಿಸಬೇಕು ಎನ್ನುವುದು ಪರಿಸರವಾದಿಗಳ ವಾದ.

●.ಕೇರಳದ ವಯನಾಡ್ ಸೀಮೆಯಲ್ಲಿ ಸರ್ಕಾರದ ನಿಯಮಾವಳಿ ವಿರುದ್ಧ ಆಂದೋಲನ ಆರಂಭವಾಗಿದೆ. ಗಾಡ್ಗೀಳ್ ವರದಿಯನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಗುಮಾನಿಯೇ ವಿವಾದದ ಮೂಲ. ಪಶ್ಚಿಮಘಟ್ಟದ ಸೀಮೆಯಲ್ಲಿ ಬಾಳಿ ಬದುಕಬೇಕಾದ ಸಣ್ಣ ಸಮುದಾಯಗಳಿಗೆ ನೀಡಬೇಕಾದ ರಕ್ಷಣೆ ಹಾಗೂ ಪರಿಸರ ರಕ್ಷಣೆ ವಿಚಾರದಲ್ಲಿ ಸಮತೋಲನ ಸಾಧಿಸುವುದು ಹಾಗೂ ವಿವಾದ ದೊಡ್ಡ ಸ್ವರೂಪಕ್ಕೆ ತಿರುಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ್ದು ತುರ್ತು ಅಗತ್ಯ.

●.ಕೇಂದ್ರ ಪರಿಸರ ಸಚಿವರಾದ ಪ್ರಕಾಶ್ ಜಾವದ್‍ಕರ್ ಪ್ರಕಾರ ಈ ನಿಯಮಗಳು ಅಂತಿಮವಲ್ಲ; ಅದಕ್ಕೆ ಆಕ್ಷೇಪ, ತಿದ್ದುಪಡಿ ಸಲಹೆಗಳನ್ನು ನೀಡಲು ಅವಕಾಶವಿದೆ. ಆಸಕ್ತ ಎಲ್ಲರೂ ತಮ್ಮ ನಿಲುವುಗಳನ್ನು ವಿವರವಾಗಿ ಸಚಿವಾಲಯಕ್ಕೆ ಕಳುಹಿಸಿದರೆ ಮಾತ್ರ ವಿವಾದ ಬಗೆಹರಿಸಲು ಸಾಧ್ಯ.

●.ಇಸ್ರೋದ ಮಾಜಿ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಕಸ್ತೂರಿರಂಗನ್ ವರದಿ ಪ್ರಕಾರ, ಈ ಪ್ರದೇಶದ ಶೇಕಡ 37ರಷ್ಟು ಭಾಗದಲ್ಲಿ ಯಾವುದೇ ಗಣಿಗಾರಿಕೆ, ವಿದ್ಯುತ್ ಉತ್ಪಾದನೆ, ಬೃಹತ್ ಕಟ್ಟಡಗಳ ನಿರ್ಮಾಣ ಮಾಡುವಂತಿಲ್ಲ. ಪರಿಸರವಾದಿಗಳು ಈ ವರದಿಯ ಹಲವು ಅಂಶಗಳನ್ನು ವಿರೋಧಿಸುತ್ತಾರೆ. ಆದರೆ ಜನಜೀವನದ ಸ್ಥಿತಿಗತಿ, ನಿಸರ್ಗದತ್ತವಾದ ಸಂಪತ್ತನ್ನು ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವನ್ನು ಕಡೆಗಣಿಸುವಂತಿಲ್ಲ. 99 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ಪರಿಸರ ತಕ್ಷಣಾ ಕ್ರಮಗಳ ಕುರಿತು ವರದಿ ಏನನ್ನೂ ಹೇಳಿಲ್ಲ. ತುಂಬಾ ಸೂಕ್ಷ್ಮ ಸ್ಥಿತಿಯನ್ನು ಎದುರಿಸುತ್ತಿರುವ ಪ್ರದೇಶಗಳ ಕಡೆಯೇ ಸಮಿತಿ ಗಮನ ಕೇಂದ್ರೀಕರಿಸಿತ್ತು. ಇಲ್ಲೂ ಜನ ವಾಸಿಸುತ್ತಿದ್ದು, ಅವರನ್ನು ಬೇರೆ ಕಡೆಗೆ ಕಳುಹಿಸುವಂತಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

●.ಇಡೀ ಪಶ್ಷಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮಪ್ರದೇಶ ಎಂದು ಹೇಳಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಇದರ ಪರಿಸರ ವಿಭಾಗದ ಮುಖ್ಯಸ್ಥರಾಗಿದ್ದ ಪರಿಸರವಾದಿ ಮಾಧವ ಗಾಡ್ಗೀಳ್ ಸಮಿತಿಯ ವರದಿ ಅನುಷ್ಠಾನ ಯೋಗ್ಯವಲ್ಲ ಎಂಬ ಟೀಕೆ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ಸಮಿತಿ ರಚಿಸಲಾಗಿದ್ದು, ಇದು ಒಟ್ಟು ಪ್ರದೇಶದ ಶೇ. 37 ಭಾಗ ಮಾತ್ರ ಸೂಕ್ಷ್ಮ ಪ್ರದೇಶ ಎಂದು ಅಭಿಪ್ರಾಯಪಟ್ಟಿದೆ.

●.ಕೈಗಾರಿಕೆಗಳಿಗೆ ಮಾರಕ, ಅರಣ್ಯವಾಸಿ ಬುಡಕಟ್ಟು ಜನರ ಹಕ್ಕುಗಳ ದಮನ ಹಾಗೂ ಸಂರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ದಮನಿಸಿ ಪ್ರಾಧಿಕಾರದ ರಚನೆಗೆ ಶಿಫಾರಸು ಮಾಡಿದೆ. ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಕೇಂದ್ರ- ರಾಜ್ಯಗಳ ಅಧಿಕಾರವನ್ನು ಘರ್ಷಣೆಗೆ ಹೆಚ್ಚಿದೆ ಎಂಬ ವ್ಯವಸ್ಥಿತ ಅಪಪ್ರಚಾರ ಗಾಡ್ಗೀಳ್ ವರದಿ ವಿರುದ್ಧ ನಡೆಯಿತು. ಇಂಥ ವಿವಾದಾತ್ಮಕ ಅಂಶಗಳನ್ನಷ್ಟೇ ಸ್ಥಳೀಯ ಭಾಷೆಗಳಿಗೆ ತರ್ಜುಮೆಗೊಳಿಸಿ, ಹಂಚಿರುವುದೇ ವಿವಾದಕ್ಕೆ ಮೂಲಕಾರಣ.
ಅರಣ್ಯವಾಸಿ ಬುಡಕಟ್ಟು ಜನ ಮತ್ತು ರೈತರನ್ನು ಗಾಡ್ಗೀಳ್ ವರದಿ ವಿರುದ್ಧ ಎತ್ತಿಕಟ್ಟಿದವರು ಯಾರು, ಕೈಗಾರಿಕೆ, ಗಣಿಗಾರಿಕೆ, ರಾಜಕಾರಣಿಗಳ ಅನೈತಿಕ ಸಂಬಂಧದ ಲಾಬಿಗೆ ಕೇಂದ್ರ ಸರ್ಕಾರ ಮಣಿಯಿತೇ ಎಂಬ ಸಂಶಯ ಸಾರ್ವಜನಿಕರಲ್ಲಿದೆ.

●.ಹಿಮಾಲಯಕ್ಕಿಂತಲೂ ಪುರಾತನ ಎನಿಸಿಕೊಂಡಿರುವ ಈ ಪರ್ವತ ಶ್ರೇಣಿ ಜೀವವೈವಿಧ್ಯ ಸಂಪತ್ತಿನ ಖಜಾನೆ. ಇದನ್ನು ಪ್ರತ್ಯೇಕವಾಗಿ ಮುಚ್ಚಿಟ್ಟು ಕಾಪಾಡಿಕೊಳ್ಳಬೇಕು. 15 ಕೋಟಿ ವರ್ಷ ಹಿಂದೆ ಅಸ್ತಿತ್ವಕ್ಕೆ ಬಂದಿತೆನ್ನಲಾದ ಈ ಪ್ರಾಕೃತಿಕ ಸಿರಿ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ.

●.ಹೊಸ ರೈಲ್ವೆ ಮಾರ್ಗ, ಹೆದ್ದಾರಿ, ಜಲವಿದ್ಯುತ್ ಯೋಜನೆಗಳಿಗೂ ಇಲ್ಲಿ ಆಸ್ಪದ ನೀಡಬಾರದು ಎಂದು ಗಾಡ್ಗೀಳ್ ಸಮಿತಿ ಪ್ರತಿಪಾದಿಸಿದೆ. ಆದರೆ ಕಸ್ತೂರಿರಂಗನ್ ವರದಿ ಗಣಿನಿಷೇಧವನ್ನು ಶೇಕಡ 50ಕ್ಕೆ ಸೀಮಿತಗೊಳಿಸಿದೆ. ಗುಂಡ್ಯ ಹಾಗೂ ಕೇರಳದ ಅತ್ತಿರಹಳ್ಳಿ ಜಲವಿದ್ಯುತ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಗಾಡ್ಗೀಳ್ ಸಮಿತಿಯ ಜನತಾಂತ್ರಿಕ ಸಂವಾದವನ್ನು ದಮನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿವೆ ಎನ್ನುವುದು ಮಾಧವ ಗಾಡ್ಗೀಳ್ ಅವರ ಆರೋಪ. ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ಪಡೆದೇ ವರದಿ ಸಿದ್ಧಪಡಿಸಲಾಗಿತ್ತು ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅತ್ಯಾಧುನಿಕ ಉಪಗ್ರಹ ಬಿಂಬ ತಂತ್ರಜ್ಞಾನ ಬಳಸಿ ಪಶ್ಚಿಮಘಟ್ಟದ ಅಧ್ಯಯನ ನಡೆಸಲಾಗಿದೆ. ಜನವಸತಿ, ಕೃಷಿ ಪ್ರದೇಶ ಹಾಗೂ ಪ್ಲಾಂಟೇಷನ್‍ಗಳು ಶೇ. 58.44 ಭಾಗದಲ್ಲಿವೆ. ಉಳಿದ 41.56 ಭಾಗದ ಶೇಕಡ 90 ಭಾಗ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್ ವಾದಿಸುತ್ತಾರೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷಿದ್ಧ; ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪಿಸುವಂತಿಲ್ಲ. ರಸಗೊಬ್ಬರ, ತೈಲಾಗಾರ, ಚರ್ಮೋದ್ಯಮ, ತಾಮ್ರದ ಕುಲುಮೆ ಆರಂಭಿಸುವಂತಿಲ್ಲ. ಆದರೆ ಆಹಾರ ಮತ್ತು ಹಣ್ಣು ಸಂರಕ್ಷಣೆ ಘಟಕ ಆರಂಭಿಸಬಹುದು ಎಂದು ವರದಿ ಹೇಳಿದೆ.


     —ಪಶ್ಷಿಮಘಟ್ಟದಲ್ಲಿ ಮಾನವ ನಿರ್ಮಿತ ಬಂಡವಾಳ ಬೆಳೆಯುತ್ತಿದೆ. ಪ್ರಕೃತಿ ನಿರ್ಮಿತ ಖಜಾನೆ ಬರಿದಾಗುತ್ತಿದೆ ಎಂಬ ಗಾಡ್ಗೀಳ್ ವರದಿಯ ಕಾಳಜಿಯನ್ನು ಅಭಿವೃದ್ಧಿಗೆ ಮಾರಕ ಎಂದು ಹೇಳಿ ಮೂಲೆಗುಂಪು ಮಾಡಲಾಗಿದೆ. ಇಂಥ ಚರ್ಚೆಯನ್ನು ಹುಟ್ಟುಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲ ಹಿತಾಸಕ್ತಿಗಳ ಹುನ್ನಾರವೂ ಪಶ್ಚಿಮಘಟ್ಟದ ರಕ್ಷಣೆಗೆ ಮಾರಕವಾಗಿದೆ. ಇಂಥ ಅಪೂರ್ವ ತಾಣ ರಕ್ಷಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ಸಮುದಾಯಿಕ ಚಳವಳಿ ಅನಿವಾರ್ಯ. ಇತ್ತೀಚೆಗೆ ಕೇಂದ್ರ ಸರ್ಕಾರ 04-09-2015ರಂದು ಹೊಸ ಅಧಿಸೂಚನೆಯೊಂದನ್ನು ಹೊರತರುತ್ತಾ ಕೇಂದ್ರ ಪರಿಸರ ಮಂತ್ರಿ ಪ್ರಕಾಶ್ ಜಾದವ್‍ಕರ್ ಪಶ್ಚಿಮಘಟ್ಟದ ಎಲ್ಲಾ ಜೀವವೈವಿಧ್ಯಗಳನ್ನು ಉಳಿಸಿಕೊಳ್ಳುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಧರ್ಮೋರಕ್ಷತಿ ರಕ್ಷಿತಾಃ ಎಂಬಂತೆ ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಮನುಷ್ಯನಿಗೆ ಶುದ್ಧ ಗಾಳಿ, ಶುದ್ಧ ನೀರು, ಶಾಂತ ಜೀವನವನ್ನು ನೀಡುವುದಕ್ಕೆ ಪರಿಸರವು ಸದಾ ತನ್ನ ಕೊಡುಗೆಯನ್ನು ನೀಡುತ್ತಲೇ ಬಂದಿದೆ.

(Courtesy : Universal Coaching Centre. Bangalore) 

No comments:

Post a Comment