"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 1 January 2014

ಪರಿಷ್ಕೃತ ಲೋಕಪಾಲ ಮಸೂದೆಯ ಮಹತ್ವದ ಮುಖ್ಯಾಂಶಗಳು (LOKPAL ACT) :

★ ಪರಿಷ್ಕೃತ ಲೋಕಪಾಲ ಮಸೂದೆಯ ಮಹತ್ವದ ಮುಖ್ಯಾಂಶಗಳು :
ಪರಿಷ್ಕೃತ ಲೋಕಪಾಲ ಮಸೂದೆಗೆ ರಾಜ್ಯಸಭೆ ಅಂಗೀಕಾರ ನೀಡಿದ ಬಳಿಕ ಲೋಕಸಭೆಯೂ ಅದನ್ನು ಅಂಗೀಕರಿಸುವುದರೊಂದಿಗೆ, ಮಹತ್ವದ ಭ್ರಷ್ಟಾಚಾರ ನಿಗ್ರಹ ಮಸೂದೆಗೆ ಸಂಸತ್ತು ತನ್ನ ಒಪ್ಪಿಗೆಯ ಮುದ್ರೆಯನ್ನು ನೀಡಿದೆ.

ಪರಿಷ್ಕೃತ ಲೋಕಪಾಲ ಮಸೂದೆಯ ಮಹತ್ವದ ಅಂಶಗಳು ಇಂತಿವೆ: 

1. ಲೋಕಾಯುಕ್ತರು: 
ರಾಜ್ಯಗಳು 365 ದಿನಗಳೊಳಗೆ ಲೋಕಾಯುಕ್ತರನ್ನು ನೇಮಿಸಬೇಕೆಂದು ಮಸೂದೆ ವಿಧಿಸುತ್ತದೆ. ಲೋಕಾಯುಕ್ತದ ಸ್ವರೂಪ ಮತ್ತು ವಿಧವನ್ನು ನಿರ್ಧರಿಸುವ ಸ್ವಾತಂತ್ರ ರಾಜ್ಯಗಳಿಗಿದೆ. ಹಳೆಯ ಮಸೂದೆಯ ಪ್ರಕಾರ, ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವ ಇಂಗಿತವನ್ನು ರಾಜ್ಯಗಳು ವ್ಯಕ್ತಪಡಿಸಿದರೆ ಮಾತ್ರ ಕಾಯ್ದೆ ಆ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತದೆ.ರಾಜ್ಯಗಳ ಲೋಕಾಯುಕ್ತರನ್ನು ನೇಮಿಸುವ ಅಧಿಕಾರವನ್ನು ಹಳೆಯ ಮಸೂದೆ ಕೇಂದ್ರ ಸರಕಾರಕ್ಕೆ ನೀಡಿದ್ದರೆ, ಹೊಸ ಮಸೂದೆ ಈ ಅಧಿಕಾರವನ್ನು ರಾಜ್ಯಗಳಿಗೆ ನೀಡುತ್ತದೆ.

 2. ಲೋಕಪಾಲ ರಚನೆ: 
ಲೋಕಪಾಲದಲ್ಲಿ ಒಬ್ಬ ಅಧ್ಯಕ್ಷರು ಮತ್ತು ಗರಿಷ್ಠ 8 ಸದಸ್ಯರಿರುತ್ತಾರೆ. ಅವರ ಪೈಕಿ ಅರ್ಧದಷ್ಟು ಮಂದಿ ನ್ಯಾಯಾಂಗದ ಸದಸ್ಯರಾಗಿರಬೇಕು. ಇತರ 50 ಶೇ. ಪರಿಶಿಷ್ಟ ಜಾತಿ/ಪಂಗಡ, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸದಸ್ಯರನ್ನು ಹೊಂದಿರಬೇಕು . ಹಳೆಯ ಮಸೂದೆಯ ಪ್ರಕಾರ, ಅಧ್ಯಕ್ಷರು ಭಾರತದ ಮುಖ್ಯ ನ್ಯಾಯಾಧೀಶ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ಮಾಜಿ ನ್ಯಾಯಾಧೀಶ ಅಥವಾ ನಿರ್ದಿಷ್ಟ ಅರ್ಹತೆಗಳಿರುವ ನ್ಯಾಯಾಂಗೇತರ ಸದಸ್ಯನಾಗಿರಬೇಕು.

3. ಲೋಕಪಾಲ ಆಯ್ಕೆ: 
ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರಿರಬೇಕು. ಲೋಕಪಾಲ ಆಯ್ಕೆ ಸಮಿತಿಯ ಐದನೆ ಸದಸ್ಯ ‘ಶ್ರೇಷ್ಠ ನ್ಯಾಯಶಾಸ್ತ್ರಜ್ಞ’ ಆಗಿರಬೇಕು ಹಾಗೂ ಅವರನ್ನು ಆಯ್ಕೆ ಸಮಿತಿಯ ಮೊದಲ ನಾಲ್ವರು ಸದಸ್ಯರ ಶಿಫಾರಸಿನ ಆಧಾರದಲ್ಲಿ ರಾಷ್ಟ್ರಪತಿ ನೇಮಿಸಬಹುದಾಗಿದೆ. ಹಳೆಯ ಮಸೂದೆಯಲ್ಲಿ, ಐದನೆ ವ್ಯಕ್ತಿಯ ಆಯ್ಕೆಯನ್ನು ಸಂಪೂರ್ಣವಾಗಿ ರಾಷ್ಟ್ರಪತಿಯ ವಿವೇಚನೆಗೆ ಬಿಡಲಾಗಿತ್ತು.

4. ಧಾರ್ಮಿಕ ಸಂಸ್ಥೆಗಳು ಮತ್ತು ಟ್ರಸ್ಟ್: 
ಹೊಸ ಮಸೂದೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ, ವಿದೇಶಿ ಸಂಸ್ಥೆಗಳಿಂದ ಧನಸಹಾಯ ಪಡೆಯುವ ಹಾಗೂ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರುವ ಸೊಸೈಟಿಗಳು ಮತ್ತು ಟ್ರಸ್ಟ್‌ಗಳು ಬರುತ್ತವೆ. ಎಂಡೋಮೆಂಟ್ ಅಥವಾ ಧಾರ್ಮಿಕ ಅಥವಾ ದತ್ತಿ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆಗಳು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ. ಹಳೆಯ ಮಸೂದೆಯು ಸಾರ್ವಜನಿಕ ಸೇವಕ ವ್ಯಾಖ್ಯೆಯನ್ನು ವಿಸ್ತರಿಸಿ ತನ್ನ ವ್ಯಾಪ್ತಿಗೆ ಸಾರ್ವಜನಿಕರಿಂದ ದೇಣಿಗೆಗಳನ್ನು ಪಡೆಯುವ ಸೊಸೈಟಿಗಳು ಮತ್ತು ಟ್ರಸ್ಟ್‌ಗಳು ಹಾಗೂ ವಿದೇಶಿ ದೇಣಿಗೆಗಳನ್ನು (ವರ್ಷಕ್ಕೆ 10 ಲಕ್ಷ ರೂ.ಗಿಂತ ಹೆಚ್ಚು) ಪಡೆಯುವ ಸಂಘಟನೆಗಳನ್ನು ಸೇರಿಸಿಕೊಂಡಿತ್ತು.

 5. ವಿಚಾರಣಾ ಘಟಕ : 
ನೂತನ ಮಸೂದೆಯ ಪ್ರಕಾರ, ಪ್ರಕರಣವೊಂದಕ್ಕೆ ಸಂಬಂಧಿಸಿ ತನಿಖಾ ವರದಿಯನ್ನು ಪರಿಶೀಲಿಸಿದ ಬಳಿಕ ಆರೋಪಪಟ್ಟಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಲೋಕಪಾಲ, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಏರ್ಪಾಡು ಮಾಡುವಂತೆ ತನ್ನದೇ ವಿಚಾರಣಾ ಘಟಕ ಅಥವಾ ಸಂಬಂಧಿತ ತನಿಖಾ ಸಂಸ್ಥೆಗೆ ಅಧಿಕಾರ ನೀಡಬಹುದು. ಹಳೆಯ ಮಸೂದೆಯಂತೆ, ಪ್ರಕರಣದ ವಿಚಾರಣೆಯನ್ನು ಲೋಕಪಾಲದ ವಿಚಾರಣಾ ಘಟಕ ಮಾತ್ರ ಮಾಡಬಹುದಾಗಿದೆ.

6. ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (CBI): 
ಸಿಬಿಐಯ ಸ್ವಾತಂತ್ರಕ್ಕಾಗಿ ಹೊಸ ಮಸೂದೆಯಲ್ಲಿ ವಿಚಾರಣಾ ನಿರ್ದೇಶನಾಲಯವೊಂದನ್ನು ಸ್ಥಾಪಿಸಲಾಗುವುದು. ಕೇಂದ್ರೀಯ ವಿಚಕ್ಷಣಾ ಆಯುಕ್ತ (ಸಿವಿಸಿ)ರ ಶಿಫಾರಸಿನ ಆಧಾರದಲ್ಲಿ ವಿಚಾರಣಾ ನಿರ್ದೇಶಕರನ್ನು ನೇಮಿಸಲಾಗುವುದು.ಲೋಕಪಾಲ ಶಿಫಾರಸು ಮಾಡಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ವರ್ಗಾವಣೆಯನ್ನು ಲೋಕಪಾಲರ ಅನುಮತಿಯೊಂದಿಗೆ ಮಾತ್ರ ಮಾಡಬೇಕು. ಲೋಕಪಾಲ ಶಿಫಾರಿತ ಪ್ರಕರಣಗಳಿಗೆ ಸಂಬಂಧಿಸಿ ಲೋಕಪಾಲ ಕೂಡ ಸಿಬಿಐ ಮೇಲೆ ಉಸ್ತುವಾರಿ ಹೊಂದಿರುತ್ತದೆ.

7. ವಿಚಾರಣೆ-ಅವಕಾಶ : 
ಲೋಕಪಾಲ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೊದಲು ಆರೋಪಿ ಸರಕಾರಿ ಅಧಿಕಾರಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಲಾಗುವುದು.

8. ಲೋಕಪಾಲದ ವ್ಯಾಪ್ತಿಯಲ್ಲಿ ಪ್ರಧಾನಿ: 
ಕೆಲವು ಶರತ್ತುಗಳೊಂದಿಗೆ ಪ್ರಧಾನಿಯೂ ಲೋಕಪಾಲದ ವ್ಯಾಪ್ತಿಯಲ್ಲಿ ಬರುತ್ತಾರೆ ಹಾಗೂ ಪ್ರಧಾನಿ ವಿರುದ್ಧವಿರುವ ದೂರುಗಳನ್ನು ಪರಿಶೀಲಿಸಲಾಗುವುದು.

 9. ತನಿಖೆ: 
ವಿಚಾರಣೆ 60 ದಿನಗಳಲ್ಲಿ ಮುಗಿಯಬೇಕು ಹಾಗೂ ತನಿಖೆ ಆರು ತಿಂಗಳಲ್ಲಿ ಮುಕ್ತಾಯಗೊಳ್ಳಬೇಕು. ಸರಕಾರಿ ನೌಕರನ ಹೇಳಿಕೆಯನ್ನು ಆಲಿಸಿದ ಬಳಿಕವಷ್ಟೆ ಲೋಕಪಾಲ ತನಿಖೆಗೆ ಆದೇಶ ನೀಡಬೇಕು.ಪ್ರಧಾನಿ ವಿರುದ್ಧದ ತನಿಖೆಯನ್ನು ರಹಸ್ಯವಾಗಿ ನಡೆಸಬೇಕು ಹಾಗೂ ಅದಕ್ಕೆಲೋಕಪಾಲ ಪೂರ್ಣ ಪೀಠದ ಮೂರನೆ ಎರಡು ಸದಸ್ಯರ ಅನುಮೋದನೆ ಬೇಕು.

10. ದಂಡ: 
ಸುಳ್ಳು ಮತ್ತು ಕ್ಷುಲ್ಲಕ ದೂರುಗಳಿಗೆ ಒಂದು ವರ್ಷದವರೆಗೆ ಜೈಲುಶಿಕ್ಷೆ ಹಗೂ ಒಂದು ಲಕ್ಷ ರೂ.ವರೆಗೆ ದಂಡ. ಸರಕಾರಿ ನೌಕರರಿಗೆ ಏಳು ವರ್ಷಗಳವರೆಗೆ ಜೈಲು. ಕ್ರಿಮಿನಲ್ ದುರ್ವರ್ತನೆ ಹಾಗೂ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದಕ್ಕಾಗಿ 10 ವರ್ಷಗಳವರೆಗೆ ಜೈಲು ಶಿಕ್ಷೆ.

ಲೋಕಪಾಲದ ಸುದೀರ್ಘ ಪಯಣ : 

★ 1966- ಸಂಸದರು ಸೇರಿದಂತೆ ಸಾರ್ವಜನಿಕ ಸೇವಕರ ವಿರುದ್ಧದ ದೂರುಗಳ ಬಗ್ಗೆ ಗಮನ ಹರಿಸಲು ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪಿಸುವ ಬಗ್ಗೆ ಮೊರಾರ್ಜಿ ದೇಸಾಯಿ ನೇತೃತ್ವದ ಮೊದಲ ಆಡಳಿತ ಸುಧಾರಣಾ ಆಯೋಗದ ಶಿಫಾರಸು.

★ 1968-2001- ಒಂದರ ನಂತರ ಒಂದರಂತೆ ಬಂದ ಸರಕಾರಗಳು ಲೋಕಪಾಲ ಮಸೂದೆಯನ್ನುಎಂಟು ಬಾರಿ ಮಂಡಿಸಿದವು.

 ★ 2002- ನ್ಯಾ. ಎಂ.ಎನ್. ವೆಂಕಟಾಚಲಯ್ಯ ನೇತೃತ್ವದ ಸಂವಿಧಾನ ಪರಿಶೀಲನಾ ಆಯೋಗಲೋಕಪಾಲ ಮತ್ತು ಲೋಕಾಯುಕ್ತಗಳ ಸ್ಥಾಪನೆಗೆ ಒತ್ತು ನೀಡಿತು.

 ★ 2004- ಲೋಕಪಾಲ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಯುಪಿಎ-1ರ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಭರವಸೆ ನೀಡಿತು.

★ 2005- ಲೋಕಪಾಲವನ್ನು ತಡವಿಲ್ಲದೆ ಅನುಷ್ಠಾನಗೊಳಿಸಬೇಕು ಎಂದು ವೀರಪ್ಪ ಮೊಯ್ಲಿ ನೇತೃತ್ವದ ಎರಡನೆ ಆಡಳಿತಾತ್ಮಕ ಸುಧಾರಣಾ ಆಯೋಗ ಪುನರುಚ್ಚರಿಸಿತು.

 ★ 2011ಜನವರಿ: ಯುಪಿಎ-2ರ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ಗುಂಪು ಲೋಕಪಾಲ ಮಸೂದೆ ಸೇರಿದಂತೆ ಹಲವು ಭ್ರಷ್ಟಾಚಾರನಿಗ್ರಹ ಕ್ರಮಗಳನ್ನು ಸೂಚಿಸಿತು.

 ಎಪ್ರಿಲ್ 5: ತನ್ನ ತಂಡ ಸಿದ್ಧಪಡಿಸಿದ ಜನ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಝಾರೆ ಮತ್ತು ತಂಡ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಮೊದಲ ಉಪವಾಸ ನಡೆಸಿತು.

ಎಪ್ರಿಲ್ 9: ಸಚಿವರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ಜಂಟಿ ಕರಡು ಸಮಿತಿಯನ್ನು ಸರಕಾರ ರಚಿಸಿದ ಹಿನ್ನೆಲೆಯಲ್ಲಿ ಅಣ್ಣಾ ತನ್ನ ಉಪವಾಸನಿಲ್ಲಿಸಿದರು.

 ಜೂನ್ 21: ಉಭಯ ಬಣಗಳು ಪ್ರತ್ಯೇಕ ಕರಡುಗಳನ್ನು ಸಲ್ಲಿಸುವುದರೊಂದಿಗೆ ಕರಡು ಸಮಿತಿಯ ಕೊನೆಯ ಸಭೆ ಕೊನೆಗೊಂಡಿತು.

ಆಗಸ್ಟ್ 4: ಸರಕಾರದಿಂದ ಲೋಕಪಾಲ ಮಸೂದೆ ಮಂಡನೆ. ಇದು ಲೋಪದೋಷಗಳನ್ನು ಒಳಗೊಂಡಿದೆ ಎಂಬುದಾಗಿ ಅದರ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು. ಆಗಸ್ಟ್ 8: ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಒಪ್ಪಿಸಲಾಯಿತು.  

ಆಗಸ್ಟ್ 16: ಜನಲೋಕಪಾಲ ಮಸೂದೆಗಾಗಿ ಅಣ್ಣಾ ಎರಡನೆ ಉಪವಾಸ ಆರಂಭಿಸಿದರು.  

ಡಿಸೆಂಬರ್ 22: ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಯನ್ನು ಸರಕಾರ ಮರುಮಂಡಿಸಿತು. ಡಿಸೆಂಬರ್ 27: ಲೋಕಸಭೆ ಮಸೂದೆಯನ್ನು ಅಂಗೀಕರಿಸಿತು.  

ಡಿಸೆಂಬರ್ 29: ರಾಜ್ಯಸಭೆಯಲ್ಲಿ ಮಸೂದೆಯ ಮಂಡನೆ. 2012 ರಾಜ್ಯಸಭೆಯಲ್ಲಿ ಮರು ಮಂಡನೆ. ಆಯ್ಕೆ ಸಮಿತಿಗೆ ಹಸ್ತಾಂತರ

2013 ಡಿಸೆಂಬರ್ 10:  ನೂತನ ಭ್ರಷ್ಟಾಚಾರ ನಿಗ್ರಹ ಕಾನೂನನ್ನು ತುರ್ತಾಗಿ ಮಂಡಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರದ ತನ್ನ ಗ್ರಾಮದಲ್ಲಿ ಅಣ್ಣಾ ಹಝಾರೆ ಉಪವಾಸ ಆರಂಭಿಸಿದರು.

ಡಿಸೆಂಬರ್ 13: ರಾಜ್ಯಸಭೆಯಲ್ಲಿ ತಿದ್ದುಪಡಿಗೊಂಡ ಮಸೂದೆಯ ಮಂಡನೆ. ಡಿಸೆಂಬರ್ 18: ಪರಿಷ್ಕೃತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ. ಉಪವಾಸ ನಿಲ್ಲಿಸಿದ ಅಣ್ಣಾ ಹಝಾರೆ.
(ಮೂಲ: ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನ)

1 comment: